ಹುಣಸೂರು: ‘ಶಾಸ್ತ್ರಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಪುಣ್ಯ ಅವರು ಶ್ರೀರಾಮರಕ್ಷಾ ಸ್ತೋತ್ರವನ್ನು 3 ನಿಮಿಷ 6 ಸೆಕೆಂಡ್ಗಳಲ್ಲಿ ಹೇಳುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಭಾರತದ ಅತ್ಯಂತ ವೇಗವಾಗಿ ಸ್ತೋತ್ರ ಪಠಿಸಿ ದಾಖಲೆ ನಿರ್ಮಿಸಿದ್ದಾರೆ’ ಎಂದು ಶಾಸ್ತ್ರಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ರಾಧಾಕೃಷ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಾಸ್ತ್ರಿ ವಿದ್ಯಾಸಂಸ್ಥೆ ಕಳೆದ 30 ವರ್ಷದಿಂದ ಶಿಕ್ಷಣದಲ್ಲಿ ವಿಭಿನ್ನತೆ ಕಟ್ಟಿಕೊಡುವ ದಿಕ್ಕಿನಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಅಧ್ಯಾತ್ಮ ತಿಳಿಹೇಳುವ ಮೂಲಕ ಭವಿಷ್ಯದ ಪ್ರಜೆಗಳಲ್ಲಿ ಸದೃಢ ವ್ಯಕ್ತಿತ್ವ ರೂಪಿಸುತ್ತಿದೆ. ಇದಕ್ಕೆ ‘ಪುಣ್ಯ’ ಅವರ ಸಾಧನೆ ಉದಾಹರಣೆ’ ಎಂದರು.
ವಿದ್ಯಾರ್ಥಿನಿ ಪುಣ್ಯ ಮಾತನಾಡಿ, ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ 2018ರಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿ 3 ನಿಮಿಷ 18 ಸೆಕೆಂಡ್ಗಳಲ್ಲಿ ಶ್ರೀರಾಮ ಸ್ತೋತ್ರವನ್ನು ಪಠಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಡಿಸೆಂಬರ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಠಿಸಿದ್ದು, ಖುಷಿ ತಂದಿದೆ’ ಎಂದರು.
‘ಯಾವುದೇ ಸಾಧನೆಗೂ ಮನೆ ಮತ್ತು ಶಾಲೆಯ ವಾತಾವರಣ ಪರಿಣಾಮ ಬೀರುತ್ತದೆ. ಮನೆಯಲ್ಲಿ ತಾಯಿ ಸಂಧ್ಯಾ ಅವರು ನಿತ್ಯ ಭಗವದ್ಗೀತೆ ಹಾಗೂ ಶ್ರೀರಾಮ ಸ್ತೋತ್ರ ಪಠಿಸುವ ಸಂಪ್ರದಾಯ ಹೊಂದಿದ್ದಾರೆ. ಸಂಜೆ ಮನೆಯಲ್ಲಿ ನಾವೂ ಅವರೊಂದಿಗೆ ಹೇಳುತ್ತಿದ್ದೆವು. ಶಾಲೆಯಲ್ಲೂ ಸಂಸ್ಕಾರ ಮತ್ತು ಆಧ್ಯಾತ್ಮ ವಿಷಯ ಇದ್ದ ಕಾರಣ ತರಗತಿಯಲ್ಲೂ ಕಲಿಯುವ ಅವಕಾಶ ಸಿಕ್ಕಿ ಈ ಸಾಧನೆಗೆ ಪುಷ್ಠಿ ಸಿಕ್ಕಿತು’ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವಿಶಂಕರ್, ಪುಣ್ಯ ಪೋಷಕರಾದ ಸಂಧ್ಯಾ, ವೆಂಕಟೇಶ್, ಪಬ್ಲಿಕ್ ಸ್ಕೂಲ್ ಮುಖ್ಯಶಿಕ್ಷಕ ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.