
ಮೈಸೂರು: ‘ಬಿ.ಆರ್.ಅಂಬೇಡ್ಕರ್ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ. ಅವರ ನಿಜ ಜೀವನದ ಬಗ್ಗೆ ಬೆಳಕು ಚೆಲ್ಲುವುದು ಅತ್ಯಗತ್ಯ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅಖಿಲ ಭಾರತ ಸಾಹಿತ್ಯ ಪರಿಷದ್, ಕೊಡಗಿನ ರಂಗಭೂಮಿ ಟ್ರಸ್ಟ್ನಿಂದ ಇಲ್ಲಿನ ಕಿರುರಂಗ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಡ್ಡಂಡ ಸಿ.ಕಾರ್ಯಪ್ಪ ರಚನೆಯ ‘ನಿಜ ಮಹಾತ್ಮ ಬಾಬಾಸಾಹೇಬ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
‘ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದರೂ ಅವರಿಗೆ ಜವಾಹರಲಾಲ್ ನೆಹರೂ ತಮ್ಮ ಸಂಪುಟದಲ್ಲಿ ಆರ್ಥಿಕ ಸಚಿವ ಸ್ಥಾನ ನೀಡಲಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದೇ ಗುಂಪು ಪಾಲ್ಗೊಂಡಿತು ಎಂಬಂತೆ ಆಳ್ವಿಕೆ ನಡೆಯಿತು. ಬೇರೆಯವರ ಕೊಡುಗೆಗಳೂ ಇರುತ್ತವೆ ಎಂಬುದನ್ನು ತಿಳಿಸುವ ಅಗತ್ಯವಿದೆ’ ಎಂದರು.
‘ಇಂತಹ ಕೆಲಸ ಮಾಡುವವರ ಬೆಂಬಲಕ್ಕೆ ನಿಲ್ಲುತ್ತೇವೆ. ಭಾರತೀಯ ಪರಂಪರೆಯ ಸ್ವದೇಶಿ ಆಲೋಚನೆಯನ್ನೂ ಜನರೆದುರು ಇಡಬೇಕಿದೆ. ಸ್ವದೇಶಿ ಚಿಂತನೆ ಅಭಿವೃದ್ಧಿಗೆ ಅಗತ್ಯ. ಭಾರತೀಯ ಸಂಸ್ಕೃತಿ ಉಳಿವಿಗೆ ಪೂರಕ’ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ವಾದಿರಾಜ್, ‘ಮನುಷ್ಯ ತನ್ನ ಅಭಿವ್ಯಕ್ತಿಯ ಕಾರಣಕ್ಕೆ ಪ್ರಾಣಿಗಳಿಂದ ಭಿನ್ನವಾಗಿ ನಿಲ್ಲುತ್ತಾನೆ. ನಾಟಕ ಎನ್ನುವುದು ಅಭಿವ್ಯಕ್ತಿಯ ಅತ್ಯಂತ ಕಠಿಣ ಮಾರ್ಗ. 30ಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿ ಈ ನಾಟಕವನ್ನು ಬರೆಯಲಾಗಿದೆ’ ಎಂದರು.
‘ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ನಡುವಿನ ಸಂಭಾಷಣೆ, ಚರ್ಚೆಗಳನ್ನು ಕಥಾವಸ್ತುವಾಗಿ ನಾಟಕ ಹೆಣೆಯಲಾಗಿದೆ. ಇಬ್ಬರಲ್ಲಿ ಯಾರು ನಿಜವಾದ ಮಹಾತ್ಮ ಎಂಬುದನ್ನು ತೋರಲಿದೆ. ದುಂಡುಮೇಜಿನ ಸಭೆಯ ಕಾರಣ ಕಾಂಗ್ರೆಸ್ನಿಂದ ದೇಶದ್ರೋಹಿ ಎನಿಸಿಕೊಂಡಿದ್ದ ಅಂಬೇಡ್ಕರ್, ಮಹಾತ್ಮ ಎನಿಸಿಕೊಂಡಿದ್ದ ಗಾಂಧೀಜಿ ನಡುವಿನ ಅನೇಕ ಸಂಗತಿಗಳನ್ನು ತೆರೆದಿಡಲಿದೆ. ಸಾವರ್ಕರ್– ಅಂಬೇಡ್ಕರ್ ಸಂಬಂಧ, ಪಾಕಿಸ್ತಾನ ರಚನೆ ಬಗ್ಗೆ ಅವರ ಅಭಿಪ್ರಾಯವನ್ನೂ ದಾಖಲಿಸಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮಾ.ವೆಂಕಟರಾಮ್, ಆದಿತ್ಯ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರಶೇಖರ್, ಪರಿಷದ್ ವಲಯ ಪ್ರಮುಖ ವಿ.ರಂಗನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸುಬ್ರಹ್ಮಣ್ಯ, ಟ್ರಸ್ಟ್ ಕಾರ್ಯದರ್ಶಿ ಅನಿತಾ ಕಾರ್ಯಪ್ಪ ಹಾಜರಿದ್ದರು.
Cut-off box - ‘ವಿಭಜನೆ ಕುರಿತ ಅಂಬೇಡ್ಕರ್ ನಿಲುವು ತಿಳಿಯಬೇಡವೇ’ ‘ಅಂಬೇಡ್ಕರ್ರಿಂದ ಮೋಸವಾಯಿತು ಮೀಸಲಾತಿ ಬಗ್ಗೆ ಸಿಟ್ಟಿದೆ ಎಂದು ಆರೋಪಿಸುವವರು ಅವರ ‘ಥಾಟ್ಸ್ ಆನ್ ಪಾಕಿಸ್ತಾನ’ ಕೃತಿ ಓದಿದರೆ ವಿಭಜನೆ ಕುರಿತ ಅವರಲ್ಲಿನ ಸ್ಪಷ್ಟತೆಯು ಆಶ್ಚರ್ಯ ಹುಟ್ಟಿಸುತ್ತದೆ. ಅವರ ನಿಲುವನ್ನು ಇಂದು ಹೇಳಿದರೆ ಅದನ್ನು ಹಿಂದುತ್ವವಾದಿಯ ಹೇಳಿಕೆ ಎನ್ನುವ ಸಾಧ್ಯತೆಯಿದೆ. ಹಾಗಾದರೆ ಇದನ್ನು ತಿಳಿಸುವುದು ಬೇಡವೇ’ ಎಂದು ಲೇಖಕ ಅಡ್ಡಂಡ ಸಿ.ಕಾರ್ಯಪ್ಪ ಪ್ರಶ್ನಿಸಿದರು. ‘ಧರ್ಮದ ಆಧಾರದಲ್ಲಿ ವಿಭಜನೆ ಹೊಂದಿದ ಮೇಲೆ ಮುಸ್ಲಿಮರೆಲ್ಲರೂ ಹೋಗಬೇಕಲ್ಲವೇ ಎಂದು ಪ್ರಶ್ನಿಸಿದ್ದ ಅವರು ಒಂದು ವೇಳೆ ಅವರು ಉಳಿದುಕೊಂಡರೆ ದೇಹದಲ್ಲಿ ಬೆಳೆದಿರುವ ದುರ್ಮಾಂಸದಂತೆ ಮತ್ತೊಂದು ವಿಭಜನೆಗೆ ಕಾರಣವಾಗುತ್ತದೆ ಎಂದಿದ್ದರು. ಅಂಬೇಡ್ಕರ್ ಕಾಂಗ್ರೆಸ್ಗೆ ಬೈದಷ್ಟು ಬೇರೆ ಯಾವ ರಾಜಕೀಯ ಪಕ್ಷಗಳಿಗೂ ಬೈದಿಲ್ಲ. ಗಾಂಧೀಜಿಯನ್ನು ವಿಶ್ವಾಸ ಘಾತಕ ಸರ್ವಾಧಿಕಾರಿ ಎಂದಿದ್ದರು’ ಎಂದರು. ‘ಆರ್ಎಸ್ಎಸ್ ಪ್ರಮುಖರಾಗಿದ್ದ ದತ್ತೋಪಂತ ಠೇಂಗಡಿ ಅವರು ಅಂಬೇಡ್ಕರ್ ಕುರಿತು ಬರೆದ ಕೃತಿಯನ್ನು ಮೂಲವಾಗಿ ಇರಿಸಿಕೊಂದು ನಾಟಕ ಬರೆಯಲಾಗಿದೆ. ಆರ್ಎಸ್ಎಸ್ ನೂರನೇ ವರ್ಷ ಪೂರೈಸಿರುವ ಕಾರಣ ನಾಟಕದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಮತ್ತು ಅಂಬೇಡ್ಕರ್ ನಡುವಿನ ಸಂಭಾಷಣೆ ಒಳಗೊಂಡಿದೆ. ಅ.13 14 ಮತ್ತು 16ರಂದು ಕಿರುರಂಗ ಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.