ADVERTISEMENT

ಬೀದಿಗೆ ಬಿದ್ದ ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ

ರೀಡ್‌ ಅಂಡ್ ಟೇಲರ್‌ನಲ್ಲಿ ಕೆಲಸ ಮಾಡುತ್ತಿದ್ದವರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 11:24 IST
Last Updated 5 ಫೆಬ್ರುವರಿ 2021, 11:24 IST

ಮೈಸೂರು: ರೀಡ್ ಅಂಡ್ ಟೇಲರ್ ಕಾರ್ಖಾನೆಯಲ್ಲಿ ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ ಮರಳಿ ಉದ್ಯೋಗ ನೀಡಬೇಕು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಶಿಕುಮಾರ್ ಒತ್ತಾಯಿಸಿ‌ದರು.

ಕಾರ್ಖಾನೆಯ ಆಡಳಿತ ಮಂಡಳಿ ವಿಸರ್ಜನೆಯಾಗಿದೆ ಎಂದು ಹೇಳಿ ಹೊಸ ಹೆಸರನ್ನಿಟ್ಟುಕೊಂಡು ಹಿಂದಿನ ಆಡಳಿತ ಮಂಡಳಿಯೇ ಕಾರ್ಖಾನೆಯನ್ನು ಪುನರ್ ಆರಂಭಿಸಿದೆ. ಹಿಂದಿನ ಕಾಯಂ ನೌಕರರನ್ನು ಪರಿಗಣಿಸದೇ ಗುತ್ತಿಗೆ ಆಧಾರದ ಮೇಲೆ ಕಡಿಮೆ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಳೆದ 82 ದಿನಗಳಿಂದ ಕಾರ್ಮಿಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಸಚಿವರು, ಕಾರ್ಮಿಕರ ಸಚಿವರು, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಬೀದಿಪಾಲಾಗಿರುವ ಕಾರ್ಮಿಕರಿಗೆ ಸದ್ಯ ಉಪವಾಸ ಸತ್ಯಾಗ್ರಹ ಒಂದೇ ಉಳಿದಿರುವ ದಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

22 ವರ್ಷಗಳಿಂದ ನಿರಂತರವಾಗಿ ದುಡಿದ ಕಾರ್ಮಿಕರಿಗೆ ₹ 80 ಸಾವಿರ ನೀಡಿ ನೀವು ಕೆಲಸಕ್ಕೆ ಬರುವುದು ಬೇಡ ಎಂದರೆ ಕಾರ್ಮಿಕರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಯುವತಿ ಸಾವು

ಕೆಲಸ ನೀಡುವಂತೆ ಬಗೆಬಗೆಯಾಗಿ ಕಾರ್ಖಾನೆಯಲ್ಲಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಇದರಿಂದ ಬೇಸರದಿಂದ ಮನೆಗೆ ಹೋದ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಒಂದು ವೇಳೆ ಇವರಿಗೆ ಕೆಲಸ ನೀಡಿದ್ದರೆ ಇವರ ಸಾವು ಸಂಭವಿಸುತ್ತಿರಲಿಲ್ಲ. ಬೀದಿಗೆ ಬಿದ್ದಿರುವ ಕಾರ್ಮಿಕರು ಸಾಯುವ ಮುನ್ನ ಕೆಲಸ ನೀಡಬೇಕು ಎಂದು ಮನವಿ ಮಾಡಿದರು.

ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ನಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶ ಇದೆ. ಆಡಳಿತ ಮಂಡಳಿ ನಮ್ಮ ಮನವಿಗೆ ಓಗೊಟ್ಟು ಆದಷ್ಟು ಬೇಗ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.