ಮಡಿಕೇರಿ: ‘ಕೆಲ ಸುದ್ದಿ ವಾಹಿನಿಗಳಿಗೆ ಜೆಡಿಎಸ್ ನಾಯಕರನ್ನು ತೋರಿಸಿದರೆ ಮಾತ್ರ ಟಿಆರ್ಪಿ ಲಭಿಸುತ್ತಿರಬಹುದು. ಅದಕ್ಕೆ ಪ್ರತಿನಿತ್ಯವೂ ಜೆಡಿಎಸ್ ನಾಯಕರ ಸುದ್ದಿಗಳನ್ನೇ ಪ್ರಸಾರ ಮಾಡುತ್ತಾರೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಇಲ್ಲಿ ಭಾನುವಾರ ಹೇಳಿದರು.
ಇಬ್ಬನಿ ರೆಸಾರ್ಟ್ ಬಳಿ ಮಾತನಾಡಿ, ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆದಿದ್ದು ಅವರ ಖಾಸಗಿ ವಿಚಾರ. ಕೆಲ ಮಾಧ್ಯಮಗಳು ಮನಸ್ಸಿಗೆ ತೋಚಿದಂತೆ ಸುದ್ದಿ ಪ್ರಸಾರ ಮಾಡುತ್ತಿವೆ. ಇಬ್ಬನಿ ರೆಸಾರ್ಟ್ನಲ್ಲಿ ಪ್ರತಿ ಕಾಟೇಜ್ಗೆ ರಿಯಾಯಿತಿ ಕಳೆದು ₹ 14 ಸಾವಿರ ದರವಿದೆ. ಆನ್ಲೈನ್ನಲ್ಲಿ ಪರಿಶೀಲಿಸಬಹುದು. ಆದರೆ, ಕೆಲ ಸುದ್ದಿ ವಾಹಿನಿಗಳು ಅವರ ಮನಸ್ಸಿಗೆ ತೋಚಿದ ದರವನ್ನೇ ತೋರಿಸುತ್ತಿವೆ’ ಎಂದರು.
‘ರೆಸಾರ್ಟ್ಗೆ ಬಂದಿದ್ದಕ್ಕೆ ಟೀಕೆ ಮಾಡುತ್ತಿರುವ ಬಿಜೆಪಿ ಮುಖಂಡರು, ಚುನಾವಣಾ ಪ್ರಚಾರದ ವೇಳೆ ಎಲ್ಲಿಗೆ ಹೋಗಿ ಮಲಗುತ್ತಾರೆ. ಅವರು ರೆಸಾರ್ಟ್ಗೆ ತೆರಳುವುದಿಲ್ಲವೇ? ಹಿರಿಯ ರಾಜಕಾರಣಿ ಗೋವಿಂದ ಕಾರಜೋಳ ಅವರು ಕೀಳುಮಟ್ಟದ ಟೀಕೆ ಮಾಡಬಾರದಿತ್ತು. ಬಿಜೆಪಿ ಆಡಳಿತದ ಅವಧಿಗಿಂತಲೂ ನಾವು ಉತ್ತಮವಾಗಿ ನಡೆದುಕೊಳ್ಳುತ್ತಿದ್ದೇವೆ’ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಭಾನುವಾರ ಮಧ್ಯಾಹ್ನಕ್ಕೆ ಮುಕ್ತಾಯವಾಯಿತು. ರೆಸಾರ್ಟ್ ಬಳಿ ಯಾವುದೇ ಪ್ರತಿಕ್ರಿಯೆ ನೀಡದೆ ಮಂಡ್ಯಕ್ಕೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.