ADVERTISEMENT

ಮಾಧ್ಯಮಗಳ ಸಮ್ಮುಖದಲ್ಲಿ ಶಾಸಕ ಸಾ.ರಾ.ಮಹೇಶ್‌– ಅಡಗೂರು ಎಚ್‌.ವಿಶ್ವನಾಥ್ ಜಟಾಪಟಿ

ಮತ್ತೆ ಶಾಸಕ ಸಾ.ರಾ.ಮಹೇಶ್‌–ಹಳ್ಳಿಹಕ್ಕಿಯ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 17:16 IST
Last Updated 17 ಆಗಸ್ಟ್ 2020, 17:16 IST

ಮೈಸೂರು: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್ ಸೋಮವಾರ ಮಾಧ್ಯಮಗಳ ಸಮ್ಮುಖ ಪರಸ್ಪರ ಬೈದಾಡಿಕೊಂಡರು.

‘ನಾನು ಸಚಿವನಾಗೋದು ನಿಮಗೆ ಡೌಟಾ ?’ ಎಂದು ವಿಶ್ವನಾಥ್ ಮಾಧ್ಯಮದವರನ್ನೇ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.

ಮೈಮುಲ್‌ನ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್‌, ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್‌ ಮೇಲೆ ಹಲ್ಲೆಗೆ ಸಂಚು ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ, ‘ನಾನು ಭಿಕ್ಷುಕನ ಬಗ್ಗೆ ಮಾತನಾಡಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ತಿವಿದರು.

ADVERTISEMENT

‘ಅವರು ನನ್ನನ್ನು ಕೊಚ್ಚೆ ಎಂದಿದ್ದಾರೆ. ನಾನು ಅವರನ್ನು ಭಿಕ್ಷುಕ ಎಂದಿದ್ದೇನೆ. ಕೊಚ್ಚೆ, ಭಿಕ್ಷುಕನ ಬಗ್ಗೆ ಮಾತನಾಡಲ್ಲ’ ಎಂದು ಟಾಂಗ್ ನೀಡಿದರು.

‘ತಪ್ಪು ಮಾಡೋದು ಸಹಜ. ಆದರೆ ಹಿರಿಯರಾಗಿ ಮಗನಿಗೆ ಬುದ್ದಿ ಹೇಳಬೇಕಿತ್ತು. ಅದು ಬಿಟ್ಟು ಸಚಿವ ಸ್ಥಾನಕ್ಕೆ ತಳಕು ಹಾಕಿಕೊಂಡು ಮಾತನಾಡಿದ್ದು ಸರಿಯಲ್ಲ. ರಾಜ್ಯದ ದುರ್ದೈವವಿದು’ ಎಂದು ಸಾ.ರಾ.ಮಹೇಶ್‌ ವ್ಯಂಗ್ಯವಾಡಿದರು.

ನಿಮಗೆ ಡೌಟಾ..?

ಶಾಸಕ ಸಾ.ರಾ.ಮಹೇಶ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ‘ಸಾ.ರಾ.ಮಹೇಶ್ ಕೊಚ್ಚೆಗುಂಡಿ ಎಂದು ಮೊದಲೇ ಹೇಳಿದ್ದೇನೆ. ನಾನು ಶುಭ್ರವಾದ ಬಟ್ಟೆ ಹಾಕಿರುವೆ. ಕೊಚ್ಚೆಗುಂಡಿಗೆ ಕಲ್ಲು ಎಸೆದು ನಾನೇಕೆ ನನ್ನ ಬಟ್ಟೆ ಕೊಳೆ ಮಾಡಿಕೊಳ್ಳಲಿ. ನಾನು ಅವರ ಬಗ್ಗೆ ಏನು ಮಾತನಾಡಲ್ಲ’ ಎಂದು ತಿರುಗೇಟು ನೀಡಿದರು.

‘ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ‌ ಅಧಿಕಾರದ ಆಸೆ ಇರುತ್ತೆ. ಏನು ಬೇಕಾದರೂ ಆಗಬಹುದು. ಹಾಗೆಯೇ ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ನಾನು ಮಿನಿಸ್ಟರ್ ಆಗಲ್ಲ ಅಂತ ನಿಮಗೆ ಡೌಟ್ ಇದೆಯಾ’ ಎಂದು ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರಿಗೆ ವಿಶ್ವನಾಥ್‌ ಮರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.