ನಂಜನಗೂಡು: ಇಲ್ಲಿನ ಕಪಿಲಾ ನದಿಯಲ್ಲಿ ಯುವ ಬ್ರಿಗೇಡ್ನಿಂದ ಭಾನುವಾರ ರಾತ್ರಿ ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವ ಸಂಭ್ರಮದಿಂದ ನೆರವೇರಿತು.
ಚಿತ್ರದುರ್ಗ ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ, ಮಧುರೆ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ, ಹಾವೇರಿ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹದಿನಾರು ಕಾಲು ಮಂಟಪದಲ್ಲಿ ಶಿವಲಿಂಗಕ್ಕೆ ಮಹಾಮಂಗಳಾರತಿ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರುಷೋತ್ತಮಾನಂದಪುರಿ ಮಾತನಾಡಿ, ‘ಮಹಾತ್ಮರು, ಸಂತರು, ಶರಣರು ಹಿಂದೂ ಧರ್ಮವನ್ನುವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಯುವ ಬ್ರಿಗೇಡ್ ದೇವಾಲಯಗಳ ಜಿರ್ಣೋದ್ಧಾರ, ನದಿಗಳ ಸ್ವಚ್ಛತೆ ಕಾರ್ಯ ನಡೆಸುವ ಮೂಲಕ ಸಾಮರಸ್ಯದ ಜ್ಯೋತಿ ಬೆಳಗಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ಹಿಂದೂ ಸಂಸ್ಕೃತಿ ಜಗತ್ತಿನ ಪ್ರಚೀನ ಸಂಸ್ಕೃತಿಯಾಗಿದೆ. ಹಿಂದೂ ಧರ್ಮ ಪರಕೀಯರ ಸತತ ದಾಳಿ, ಆಕ್ರಮಣಗಳನ್ನು ಸಹಿಸಿಕೊಂಡು ತಲೆ ಎತ್ತಿ ನಿಂತಿದೆ. ಯುವ ಬ್ರಿಗೇಡ್ ರಾಜ್ಯದ 9 ನದಿಗಳ ಸ್ವಚ್ಛತೆ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷ್ಣಜೋಯಿಸ್ ನೇತೃತ್ವದ ಋತ್ವಿಕರ ತಂಡ ಕಪಿಲಾ ನದಿಗೆ ವಿವಿಧ ಬಗೆಯ ಪೂಜೆ ಮಾಡಿ, ಆರತಿಗಳನ್ನು ಬೆಳಗಿದರು.
ಕಪಿಲಾ ನದಿಗೆ ಐದು ಮಂದಿ ಸಂತರು, ವಿವಿಧ ನದಿಗಳ ತೀರ್ಥ ಹಾಗೂ ಬಿಳಿಗಿರಿ ರಂಗನಬೆಟ್ಟದ ತುಳಸಿ ಪ್ರಸಾದ, ಮಂತ್ರಾಲಯದ ಮಂತ್ರಾಕ್ಷತೆ, ನಂಜುಡೇಶ್ವರನ ಭಸ್ಮವನ್ನು ಅರ್ಪಿಸಿದರು.
ನದಿಯ ಸೋಪಾನ ಕಟ್ಟೆಯ ಮೇಲೆ ಭಕ್ತರು 75 ಸಾವಿರ ದೀಪಗಳನ್ನು ಬೆಳಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.