ಪರೀಕ್ಷೆ
ಮೈಸೂರು: ‘ಎಸ್ಎಸ್ಎಲ್ಸಿ ಓದುತ್ತಿರುವ ನಿಮ್ಮ ಮಗ ಅಥವಾ ಮಗಳು ಪಿಯು ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಸ್ಕಾಲರ್ಶಿಪ್ಗೆ ಆಯ್ಕೆಯಾಗಿದ್ದಾರೆ’ ಎಂಬ ಮೆಸೇಜ್ಗಳು ಪೋಷಕರ ಮೊಬೈಲ್ಗೆ ಬರುತ್ತಿವೆ.
ಎಸ್ಎಸ್ಎಲ್ಸಿ ತರಗತಿಗೆ ಹೋದ ಮಕ್ಕಳನ್ನು ಖಾಸಗಿ ಪಿಯು ಕಾಲೇಜು ಸಂಸ್ಥೆಗಳು ತಮ್ಮ ಕಾಲೇಜು ಬಸ್ಗಳ ಮೂಲಕ ಕ್ಯಾಂಪಸ್ಗೆ ಕರೆದೊಯ್ದು ಪರೀಕ್ಷೆ ನಡೆಸುತ್ತಿವೆ. ರ್ಯಾಂಕ್ಗಳನ್ನು ನೀಡಿ, ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಘೋಷಿಸಿ, ಕೂಡಲೇ ಸೀಟ್ ಬುಕ್ ಮಾಡುವಂತೆ ಒತ್ತಾಯಿಸುತ್ತಿವೆ.
‘ಸುಮಾರು ಆರು ಕಾಲೇಜುಗಳು ಪ್ರವೇಶಾತಿ ಮಾಡುವಂತೆ ಕರೆ ಮಾಡಿವೆ. ಅದರಲ್ಲಿ 2 ಕಾಲೇಜುಗಳು ಮಗನನ್ನು ತಮ್ಮ ಕ್ಯಾಂಪಸ್ಗೆ ಕರೆದೊಯ್ದು ಪ್ರವೇಶ ಪರೀಕ್ಷೆ ನಡೆಸಿದ್ದು, ಫಲಿತಾಂಶ ಕಳಿಸಿವೆ. ಇನ್ನೂ ಕಾಲೇಜು ಪ್ರವೇಶದ ಬಗ್ಗೆ ಯೋಚಿಸಿಲ್ಲ, ಚೆನ್ನಾಗಿ ಓದುವಂತೆ ಮಗನಿಗೆ ತಿಳಿಸಿದ್ದೇನೆ’ ಎನ್ನುತಾರೆ ವಿಜಯನಗರದ ನಾಗರಾಜ್.
ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಖಾಸಗಿ ಕಾಲೇಜುಗಳು ಮುಂದಾಗುತ್ತಿರುವುದನ್ನು ಶಾಲೆಗಳೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿವೆ. ಕಾಲೇಜು ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದು, ಉತ್ತಮ ಅಂಕ ಪಡೆದವರನ್ನು ಶ್ಲಾಘಿಸಲಾಗುತ್ತಿದೆ. ಇದು ಶಾಲೆಯಲ್ಲಿ ದೊರೆಯುತ್ತಿರುವ ಸೌಲಭ್ಯ ಎಂಬಂತೆ ಬಿಂಬಿಸುತ್ತಿವೆ. ಈ ಎಲ್ಲದರಿಂದ ವಿದ್ಯಾರ್ಥಿಗಳಿಗೆ ಬಿಡುವೇ ಇಲ್ಲವಾಗಿದೆ.
ಪ್ರವೇಶ ಪರೀಕ್ಷೆಯೇ ಕೀಲಿಕೈ: ಶಾಲೆಗಳ ಜತೆ ಹೊಂದಾಣಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಿಯು ಪ್ರವೇಶ ಪರೀಕ್ಷೆ ನಡೆಸುವ ಸಂಸ್ಥೆಗಳು ಪೋಷಕರಿಗೆ ಮಕ್ಕಳ ಫಲಿತಾಂಶ ಕಳಿಸಿ, ತಮ್ಮ ಕಾಲೇಜಿಗೆ ಸೇರಿಸುವಂತೆ ಪುಸಲಾಯಿಸುತ್ತವೆ. ಪ್ರವೇಶಾತಿ ಬಗ್ಗೆ ಯಾವುದೇ ಆಲೋಚನೆ ಹೊಂದಿರದ ಪೋಷಕರನ್ನು ಈ ಬಗ್ಗೆ ಯೋಚಿಸುವಂತೆ, ಕೂಡಲೇ ಪ್ರವೇಶಾತಿ ನಡೆಸುವಂತೆ ಪ್ರೇರೇಪಿಸುತ್ತವೆ. ಈ ಉದ್ದೇಶ ಸಾಧನೆಗೆ ಪ್ರವೇಶ ಪರೀಕ್ಷೆಯನ್ನು ಕೀಲಿ ಕೈ ಮಾಡಿಕೊಂಡಿವೆ.
ಇದರಿಂದ ಎಸ್ಎಸ್ಎಲ್ಸಿ ಸಂಬಂಧಿತ ಪರೀಕ್ಷೆಗಳು, ಮುಖ್ಯ ಪರೀಕ್ಷೆಗಳು ಮಾತ್ರವಲ್ಲದೇ ಕಾಲೇಜು ಪ್ರವೇಶ ಪರೀಕ್ಷೆಗೂ ವಿದ್ಯಾರ್ಥಿಗಳು ತಯಾರಿ ನಡೆಸುವಂತಾಗಿದೆ. ಟ್ಯೂಶನ್ಗಳಲ್ಲಿಯೂ ಈ ಬಗ್ಗೆ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ‘ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕ ಹಾಗೂ ಅಲ್ಲಿ ಕೇಳಲಾದ ಪ್ರಶ್ನೆಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆ ನಡೆಸುತ್ತೇವೆ. ಅಲ್ಲಿಯೂ ಸ್ಪರ್ಧೆ ಇರುತ್ತದೆ’ ಎಂದು ವಿದ್ಯಾರ್ಥಿ ಅನಿಕೇತ್ ತಿಳಿಸಿದರು.
ಮಕ್ಕಳಲ್ಲಿ ಗೊಂದಲ ಸೃಷ್ಟಿ: ‘ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಓದಬೇಕಾ ಅಥವಾ ಕಾಲೇಜು ಪ್ರವೇಶ ಪರೀಕ್ಷೆಗೆ ಓದಬೇಕಾ, ಯಾವುದು ಮುಖ್ಯ ಎಂಬ ಗೊಂದಲ ಮಕ್ಕಳಲ್ಲಿ ಒತ್ತಡ ಸೃಷ್ಟಿಸುತ್ತದೆ. ಪರೀಕ್ಷೆಗಳು ನಿರರ್ಥಕ ಎಂಬ ಭಾವನೆಯನ್ನೂ ಮೂಡಿಸಬಹುದು. ಪರೀಕ್ಷೆ ಎಂಬ ಒತ್ತಡವನ್ನು ಸರಿದೂಗಿಸಲು ಕೆಲವು ಮಕ್ಕಳಿಗೆ ಸಾಧ್ಯವಾಗುತ್ತಿರುವುದಿಲ್ಲ. ಅವರು ಈ ರೀತಿ ಎರಡು ಮೂರು ಪರೀಕ್ಷೆಗಳನ್ನು ಎದುರಿಸಬೇಕಾದರೆ ಮಾನಸಿಕ ಸಮಸ್ಯೆ ಹೊಂದಬಹುದು’ ಎಂದು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಚಿಕಿತ್ಸಾ ಮನೋವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಋತ್ವಿಕ್ ಎಸ್.ಕಶ್ಯಪ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಸ್ವ ಅರಿವು, ಆತ್ಮವಿಶ್ವಾಸ ಬೆಳೆಸಿ’
‘ಮಕ್ಕಳಲ್ಲಿ ಸ್ವ ಅರಿವು, ಆತ್ಮವಿಶ್ವಾಸ ಬೆಳೆಸುವುದರಿಂದ ಬೇರೆಯವರ ಒತ್ತಡಕ್ಕೆ ಒಳಗಾಗುವುದಿಲ್ಲ. ಈ ಮನೋಭಾವವನ್ನು ಅವರಲ್ಲಿ ಬೆಳೆಸುವುದು ಸಮಾಜದ ಕರ್ತವ್ಯ. ಇದಕ್ಕೆ ಪೂರಕವಾಗಿ ಶಾಲೆಯ ಕಾರ್ಯವಿಧಾನವೂ ಸಾಕಷ್ಟು ಬದಲಾಗಬೇಕು’ ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ವಿಸ್ತರಣಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ.ಐ.ಪಿ.ಗೌರಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಕ್ಕಳಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಎಸ್ಎಸ್ಎಲ್ಸಿ ಬಳಿಕ ಲಭ್ಯವಿರುವ ಹಲವು ಆಯ್ಕೆಗಳ ಬಗ್ಗೆ ಅವರಲ್ಲಿ ಅರಿವು ಮೂಡುತ್ತದೆ. ಇದಕ್ಕೆ ಶಿಕ್ಷಕರ ಸಹಕಾರ ಮುಖ್ಯ. ನಮ್ಮ ಸಂಸ್ಥೆಯಲ್ಲಿ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತಯಾರಿ ನೀಡಲಾಗುತ್ತದೆ. ಆದರೆ, ಅಂಕಗಳ ಹಿಂದೆ ಬಿದ್ದಿರುವ ಸಮಾಜದ ಮನಃಸ್ಥಿತಿಯು ಸರಿ ಹೋಗದಿದ್ದರೆ ಯಾವುದೇ ಪ್ರಯೋಜನವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.