ಮೈಸೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ಸುತ್ತಮುತ್ತ ನೆರೆಯಿಂದ ಹಾನಿಯಾಗಿರುವ ಗ್ರಾಮಗಳ 650 ಕುಟುಂಬಗಳಿಗೆ ₹ 13 ಲಕ್ಷ ಮೊತ್ತದ ಗೃಹೋಪಯೋಗಿ ಪರಿಕರಗಳನ್ನು ನೀಡಲು ಮೈಸೂರು ನಗರ ಕ್ಲಬ್ಗಳ ವೇದಿಕೆ ನಿರ್ಧರಿಸಿದೆ.
ಸ್ವಾತಂತ್ರ್ಯೋತ್ಸವದಂದು ಕ್ಲಬ್ಬಿನ ಸದಸ್ಯರ ಊಟದ ವೆಚ್ಚವನ್ನು ಉಳಿಸಿ ನೆರೆ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಲಾಗಿದೆ. ವಿವಿಧ ಗಾತ್ರದ 4 ಹಿಂಡಾಲಿಯಂ ಪಾತ್ರೆಗಳು, ಊಟದ ತಟ್ಟೆಗಳು, ಲೋಟಗಳು, ಆಹಾರ ಬಡಿಸುವ ಪಾತ್ರೆಗಳಿಂದ ಕೂಡಿದ ಕಿಟ್ಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗುವುದು ಎಂದು ದಿ ಹೆರಿಟೇಜ್ಕ್ಲಬ್ ಅಧ್ಯಕ್ಷ ಡಾ.ಎಸ್.ಮರೀಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. 20ರಂದು ಬೆಳಿಗ್ಗೆ ಸಾಮಾಗ್ರಿಗಳನ್ನು ಬಾಗಲಕೋಟೆಯ ಗೋವಿನಕೊಪ್ಪಕೆ ಸಾಗಿಸಲಾಗುವುದು. 21ರಂದು ಸಂತ್ರಸ್ತರಿಗೆ ವಿತರಿಸಲಾಗುವುದು. ನಾಲ್ಕು ಕ್ಲಬ್ಗಳ ಪದಾಧಿಕಾರಿಗಳು ಈ ಕಾರ್ಯಕ್ಕಾಗಿ ಬಾಗಲಕೋಟೆಗೆ ತೆರಳುವರು ಎಂದು ಹೇಳಿದರು.
ದಿ ಕಾಸ್ಮೋಪಾಲಿಟಿನ್ ಕ್ಲಬ್, ಒಂಟಿಕೊಪ್ಪಲ್ ಕ್ಲಬ್, ವಿಜಯನಗರ ಸ್ಪೋರ್ಟ್ಸ್ಕ್ಲಬ್ ಮತ್ತು ದಿ ಹೆರಿಟೇಜ್ಕ್ಲಬ್ಗಳು ಮೈಸೂರು ನಗರ ಕ್ಲಬ್ಗಳ ವೇದಿಕೆಯ ಸದಸ್ಯತ್ವ ಪಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಒಂಟಿಕೊಪ್ಪಲ್ ಕ್ಲಬ್ ಅಧ್ಯಕ್ಷ ವಿ.ಸಿ.ಪ್ರಕಾಶ್, ಕಾರ್ಯದರ್ಶಿ ಸುಬ್ರಮಣ್ಯ, ದಿ ಕಾಸ್ಮೋಪಾಲಿಟಿನ್ ಕ್ಲಬ್ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯದರ್ಶಿ ಎಚ್.ಎನ್.ಜಯಪಾಲ್, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟಿ.ಗಿರೀಶ್ ಪ್ರಸಾದ್, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.