ಮೈಸೂರಿನ ಸಿಪಾಯಿಗ್ರಾಂಡೆ ಹೋಟೆಲ್ನಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಯಿತು
ಮೈಸೂರು: ‘ರಾಜ್ಯ ಸರ್ಕಾರವು ಜನರ ಸಾಮಾಜಿಕ–ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ರಘು ಆರೋಪಿಸಿದರು.
ಇಲ್ಲಿ ಭಾನುವಾರ ನಡೆದ ವಿವಿಧ ಹಿಂದುಳಿದ ವರ್ಗಗಳ ಮುಖಂಡರರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಕೆಲವು ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರ್ಪಡೆ ಮಾಡಿ ಪಟ್ಟಿ ಪ್ರಕಟಿಸಿರುವುದಕ್ಕೆ ತೀವ್ರ ವಿರೋಧವಿದೆ’ ಎಂದು ತಿಳಿಸಿದರು.
‘1,400 ಜಾತಿಗಳ ಪಟ್ಟಿಯಲ್ಲಿ, ಹಿಂದೂ ಸಮಾಜದ ಬರೋಬ್ಬರಿ 47ಕ್ಕೂ ಹೆಚ್ಚಿನ ಜಾತಿಗಳಿಗೆ ‘ಕ್ರಿಶ್ಚಿಯನ್’ ಎಂದು ಸೇರಿಸಲಾಗಿದೆ. ಇದು ಆತಂಕಕಾರಿಯಾದುದು. ಇದನ್ನು ಸೃಷ್ಟಿಸಿದವರು ಯಾರು, ಆಯೋಗ ಪರಿಗಣಿಸಿದ್ದು ಯಾವಾಗ ಎಂಬುದಕ್ಕೆ ಆಯೋಗದಿಂದ ಸರಿಯಾದ ಉತ್ತರ ದೊರೆಯುತ್ತಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
‘ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್ ಹೀಗೆ... ಸೃಷ್ಟಿಸಲಾಗಿದೆ’ ಎಂದು ತಿಳಿಸಿದರು.
‘ಹಿಂದೂ ಧರ್ಮದವರನ್ನು ಮತಾಂತರಕ್ಕೆ ಪ್ರೇರೇಪಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತುಕೊಳ್ಳುವ ಹಾಗೂ ಈ ಜನರ ದಿಕ್ಕು ತಪ್ಪಿಸುವ ಪಿತೂರಿಯನ್ನೂ ಮಾಡಲಾಗುತ್ತಿದೆ. ಹೀಗಾಗಿಯೇ ತರಾತುರಿಯಲ್ಲಿ ಸಮೀಕ್ಷೆ ನಡೆಸಿ, ಯಾರನ್ನೋ ಓಲೈಸಲು ‘ಮತಾಂತರದ ಭಾಗ್ಯ’ ನೀಡಲು ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.
‘ಯಾವುದೇ ಜಾತಿಗೆ ಮೀಸಲಾತಿ ಕೊಡಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು, ಸಾಮಾಜಿಕ ಸ್ಥಿತಿಗತಿ ಪರಿಶೀಲಿಸಬೇಕು. ಆದರೆ, ಈ ಸರ್ಕಾರದ ಕುಮ್ಮಕ್ಕಿನಿಂದಾಗಿ ಇಲ್ಲದ ಜಾತಿಗಳನ್ನು ಆಯೋಗ ಸೇರಿಸಿದೆ. ಇಡೀ ಹಿಂದೂ ಸಮಾಜದ ಜಾತಿಗಳ ಬಡ ಅಲುಗಾಡಿಸಲು ಹಾಗೂ ಹಿಂದೂ ಧರ್ಮದ ಬೇರನ್ನು ಕಿತ್ತುಹಾಕುವ ಕಾರ್ಯಸೂಚಿ ಇಟ್ಟುಕೊಂಡಿದೆ’ ಎಂದು ದೂರಿದರು.
‘ಇದನ್ನು ವಿರೋಧಿಸಿ ಹೋರಾಟ ತೀವ್ರಗೊಳಿಸಲಾಗುವುದು. ಆಯಾ ಸಮಾಜದ ಸ್ವಾಮೀಜಿಗಳ ಗಮನಕ್ಕೂ ತರಲಾಗಿದೆ. ಕೂಡಲೇ ಆಯೋಗದವರು ಭೇಷರತ್ ಕ್ಷಮೆ ಯಾಚಿಸಿ, ‘ಇಲ್ಲದ ಜಾತಿ’ಗಳನ್ನು ಪಟ್ಟಿಯನ್ನು ಕೈಬಿಡದಿದ್ದರೆ ರಾಜ್ಯದಲ್ಲಿ ಯಾವ ಕ್ರಾಂತಿ ಬೇಕಾದರೂ ನಡೆಯಬಹುದು’ ಎಂದು ಎಚ್ಚರಿಕೆ ನೀಡಿದರು.
‘ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು. ಈ ‘ಕುತಂತ್ರದ ಪಟ್ಟಿ’ಯನ್ನು ಕಿತ್ತೆಸೆಯಬೇಕು. ಇಲ್ಲದಿದ್ದರೆ, ಸರ್ಕಾರವನ್ನು ಕಿತ್ತೊಗೆಯುವ ಕೆಲಸವನ್ನು ಹಿಂದುಳಿದ ವರ್ಗದವರು ಮಾಡಲಿದ್ದೇವೆ’ ಎಂದರು.
ವಿವಿಧ ಸಮುದಾಯಗಳ ಮುಖಂಡರಾದ ಶೈಲೇಂದ್ರ, ಯಶಸ್ವಿನಿ ಸೋಮಶೇಖರ್, ಪಿ. ಪ್ರಶಾಂತ್ ಗೌಡ, ಚನ್ನಕೇಶವಶೆಟ್ಟಿ, ವಿದ್ಯಾಸಾಗರ ಕದಂಬ, ರಶ್ಮಿ, ಮಹೇಂದ್ರ, ಪ್ರಕಾಶ್, ಸತೀಶ್ಕುಮಾರ್, ಲೋಕೇಶ್, ಮಾದಶೆಟ್ಟಿ, ಪ್ರವೀಣಶೆಟ್ಟಿ, ರಾಜು, ಮಂಜುನಾಥ್ ಪ್ರಸಾದ್, ಪುರುಷೋತ್ತಮ, ಜಗದೀಶ್, ಮಣಿರತ್ನಂ, ಸುರೇಶ್ಬಾಬು, ಗಿರೀಶ್, ಉಪೇಂದ್ರ ಕುಮಾರ್, ಎಸ್.ಎಸ್. ನಟರಾಜ್, ಸಂತೋಷ್ಕುಮಾರ್, ಕೆ,ಹರೀಶ್, ಯಶವಂತ್ ಸಿಂಗ್, ಮಹೇಶ್ರಾಜೇ ಅರಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.