ADVERTISEMENT

ಶಿಕ್ಷಕರ ಕ್ಷೇತ್ರದಲ್ಲಿ ಲಕ್ಷ್ಮಿ ಆಟ ನಡೆಯಲ್ಲ: ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 22 ಮೇ 2024, 13:57 IST
Last Updated 22 ಮೇ 2024, 13:57 IST
ಎಚ್‌.ಎ.ವೆಂಕಟೇಶ್‌
ಎಚ್‌.ಎ.ವೆಂಕಟೇಶ್‌   

ಮೈಸೂರು: ‘ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ ಸರಸ್ವತಿಯ ನೆಲೆಯಾಗಿದ್ದು, ಇಲ್ಲಿ ಲಕ್ಷ್ಮಿ (ಹಣ) ಆಟ ನಡೆಯುವುದಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಟಿಕೆಟ್ ಸಿಗಲು ಲಕ್ಷ್ಮಿ ಕಟಾಕ್ಷ ಕಾರಣ’ ಎಂದು ದೂರಿದರು.

‘ಕ್ಷೇತ್ರವು ಬುದ್ಧಿವಂತರು, ವಾಗ್ಮಿಗಳು ಪ್ರತಿನಿಧಿಸುವಂಥದ್ದು. ಮರಿತಿಬ್ಬೇಗೌಡ ಅವರು ಜೆಡಿಎಸ್‌ನಲ್ಲೇ ಇದ್ದಿದ್ದರೆ ಟಿಕೆಟ್ ಸಿಗುತ್ತಿರಲಿಲ್ಲ. ಅಲ್ಲಿನ ಲಕ್ಷ್ಮಿ ಪ್ರಭಾವ ಅರಿತೇ ಅವರು ಜೆಡಿಎಸ್ ತೊರೆದರು’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ನವರು ಜಿಲ್ಲೆಯಲ್ಲಿ ಅಧಿಕಾರಿಗಳನ್ನು, ಶಿಕ್ಷಕರನ್ನು ಹೆದರಿಸುತ್ತಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡರು ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿ ಇಂಥ ಸುಳ್ಳು ಹೇಳಬಾರದು’ ಎಂದರು.

‘ಯಾರ ಸಂಸ್ಕೃತಿ ಎಂಥದ್ದು ಎಂಬುದು ಜನಕ್ಕೆ ಗೊತ್ತಿದೆ. ಜೆಡಿಎಸ್ ಟಿಕೆಟ್ ವಂಚಿತರಾದ ಕೆ.ಟಿ. ಶ್ರೀಕಂಠೇಗೌಡ ಅವರು ಬೆಂಬಲಿಗರ ಸಭೆ ನಡೆಸುವಾಗ ಅಡ್ಡಿಪಡಿಸಿದವರು, ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದವರು ಜೆಡಿಎಸ್ ಕಾರ್ಯಕರ್ತರಲ್ಲವೇ’ ಎಂದು ಕೇಳಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸ್ವಾಮಿ ಆನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.