ADVERTISEMENT

ರೈತ ಹೋರಾಟಕ್ಕೆ ಕೆಪಿಸಿಸಿ ಮಹಿಳಾ ಘಟಕ ಬೆಂಬಲ

‘ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಪುಷ್ಪಾ ಅಮರನಾಥ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:45 IST
Last Updated 17 ಡಿಸೆಂಬರ್ 2020, 6:45 IST
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ರಾಷ್ಟ್ರೀಯ ರೈತ ಚಳವಳಿಗೆ ನೈತಿಕ ಬೆಂಬಲ ಸೂಚಿಸಿ ಹುಣಸೂರು ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶ್ರಮದಾನ ಮಾಡಿದರು
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ರಾಷ್ಟ್ರೀಯ ರೈತ ಚಳವಳಿಗೆ ನೈತಿಕ ಬೆಂಬಲ ಸೂಚಿಸಿ ಹುಣಸೂರು ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶ್ರಮದಾನ ಮಾಡಿದರು   

ಹುಣಸೂರು: ‘ಸರ್ಕಾರಗಳ ರೈತ ವಿರೋಧಿ ಕಾಯ್ದೆ ವಿರೋಧಿಸಿ ನಡೆದಿರುವ ಚಳವಳಿಗೆ ಕೆಪಿಸಿಸಿ ಮಹಿಳಾ ಘಟಕವು ‘ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ ಕಾರ್ಯಕ್ರಮದ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದೆ’ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.‍ಪುಷ್ಪಾ ಅಮರನಾಥ್ ಹೇಳಿದರು.

ತಾಲ್ಲೂಕಿನ ನಾಗಮಂಗಲ ಗ್ರಾಮದ ಶಿವಕುಮಾರ್ ಅವರ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುವ ಮೂಲಕ ಬೆಂಬಲದ ಹೋರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ 36 ಸಂಘಟನಾ ಜಿಲ್ಲೆಗಳಲ್ಲಿ ಸ್ಥಳೀಯ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹೊಲ ಗದ್ದೆಗಳಿಗೆ ತೆರಳಿ ಕೃಷಿಕರಿಗೆ ಪೂರ ಕವಾದ ಶ್ರಮದಾನದಲ್ಲಿ ಭಾಗವಹಿ ಸುವರು. ಈ ಮೂಲಕ ರೈತರಿಗೆ ಬೆಂಬಲ ಸೂಚಿಸುವರು ಎಂದು ಹೇಳಿದರು.

ಹುಣಸೂರು ಮಹಿಳಾ ಘಟಕದಿಂದ 33 ಸದಸ್ಯೆಯರು ಬೆಳಿಗ್ಗೆ 9ರಿಂದ ಧನ್ಯಕುಮಾರ್ ಅವರ ಹೊಲದಲ್ಲಿ ಟೊಮೆಟೊ, ಶ್ರೀನಿವಾಸ್ ಹೊಲದಲ್ಲಿ ಅವರೆಕಾಯಿ ಬಿಡಿಸಲು ಶ್ರಮದಾನ ಮಾಡಲಾಗಿದೆ. ಈ ಬೆಂಬಲದಿಂದ ರೈತರ ಚಳವಳಿಗೆ ಮತ್ತಷ್ಟು ಶಕ್ತಿ
ಸಿಗಲಿದೆ ಎಂದು ಅವರು ಹೇಳಿದರು.

ADVERTISEMENT

ಸನ್ಮಾನ: ತಾಲ್ಲೂಕಿನ ಆಯ್ದ 10 ಕೃಷಿ ದಂಪತಿಯನ್ನು ಕೆಪಿಸಿಸಿ ಮಹಿಳಾ ಘಟಕದಿಂದ ಗುರುತಿಸಿ ಪ್ರಗತಿಪರ ರೈತ ದಂಪತಿ ಎಂದು ಗೌರವಿಸಲಾಗುವುದು ಎಂದರು.

ವಿರೋಧ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತರ ವಿರುದ್ಧ ಜಾರಿಗೊಳಿಸಿರುವ ಕಾಯ್ದೆಗಳನ್ನು ಸಂಪೂರ್ಣ ಹಿಂಪಡೆ ಯಬೇಕು. ರೈತರಿಗೆ ಅನುಕೂಲ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಿ
ಅನ್ನದಾತನ ಬೆನ್ನಿಗೆ ಊರುಗೋಲಾಗುವ ಬದಲು ಮೋದಿ ಸರ್ಕಾರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಸಿದೆ ಎಂದು ಕಿಡಿಕಾರಿದರು.

ದೆಹಲಿಯಲ್ಲಿ ರೈತರು ಹಲವು ದಿನಗಳಿಂದ ಚಳಿಯಲ್ಲೇ ಬೀಡು ಬಿಟ್ಟಿದ್ದರೂ ಕೇಂದ್ರ ಸರ್ಕಾರ ರೈತರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳುವ ಉತ್ಸುಕತೆ ತೋರಿಲ್ಲ. ಸಂ‍ಪುಟ ಸಚಿವರು, ಕೃಷಿ ಸಚಿವರು ಅಧಿಕಾರಿಗಳು ಒಂದರ ಮೇಲೆ ಒಂದು ಸಭೆ ನಡೆಸುತ್ತಿದ್ದಾರೆ. ಈ ಸಭೆಗಳು ವಿಫಲವಾಗಿದ್ದರೂ ಮೋದಿ ಮೌನವಾಗಿದ್ದಾರೆ ಎಂದರು.

ಶಾಸಕ ಮಂಜುನಾಥ್ ಮಾತನಾಡಿ, ಮಹಿಳಾ ಘಟಕದ ಈ ನಿರ್ಧಾರವು ಶ್ಲಾಘನೀಯ ಎಂದರು.

ಕೆಪಿಸಿಸಿ ಮಹಿಳಾ ಘಟಕ ಉಪಾಧ್ಯಕ್ಷೆ ಲತಾ ಮೋಹನ್, ಮೈಸೂರು ನಗರ ಘಟಕದ ಅಧ್ಯಕ್ಷೆ ಪುಷ್ಪವಲ್ಲಿ, ಡಾ.ಸುಜಾತಾ, ನಗರಸಭೆ ಅಧ್ಯಕ್ಷ ಅನುಷಾ ರಾಘು, ನಗರಸಭೆ ಸದಸ್ಯೆ ಗೀತಾ ನಿಂಗರಾಜು, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.