ADVERTISEMENT

ಮೈಸೂರು ಸಾಹಿತ್ಯ ಸಂಭ್ರಮ: ಕ್ರಿಕೆಟ್‌– ರಾಜಕಾರಣದ ಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 10:10 IST
Last Updated 24 ಜುಲೈ 2022, 10:10 IST
ಮೈಸೂರಿನಲ್ಲಿ ಭಾನುವಾರ ನಡೆದ ‘ಮೈಸೂರು ಸಾಹಿತ್ಯ ಸಂಭ್ರಮ’ದ ಗೋಷ್ಠಿಯಲ್ಲಿ 1983ರ ವಿಶ್ವಕಪ್‌ ರೋಚಕ ಕ್ಷಣಗಳ ಕುರಿತು ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಭಾನುವಾರ ನಡೆದ ‘ಮೈಸೂರು ಸಾಹಿತ್ಯ ಸಂಭ್ರಮ’ದ ಗೋಷ್ಠಿಯಲ್ಲಿ 1983ರ ವಿಶ್ವಕಪ್‌ ರೋಚಕ ಕ್ಷಣಗಳ ಕುರಿತು ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅವರ 1983ರ ಕ್ರಿಕೆಟ್‌ ವಿಶ್ವಕಪ್‌ನ ರೋಚಕ ಕ್ಷಣಗಳ ಹಾಸ್ಯಧಾಟಿಯ ವಿವರಣೆ, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು– ಸಾಗರಿಕಾ ಘೋಷ್‌ ಮಧ್ಯೆ ನಡೆದ ರಾಜಕಾರಣದ ಬಿಸಿ ಚರ್ಚೆ, ಸಂಜಯ್‌ ಗುಬ್ಬಿ ಅವರ ಪರಿಸರದ ಕಥೆಗೆ ಸಾಹಿತ್ಯ ಪ್ರಿಯರು ಸಾಕ್ಷಿಯಾದರು.

ಇಲ್ಲಿನ ಸದರ್ನ್‌ ಸ್ಟಾರ್‌ ಹೊಟೇಲ್‌ನಲ್ಲಿ ಭಾನುವಾರ 6ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ದಲ್ಲಿ ದಿನವಿಡೀ ನಡೆದ ವಿವಿಧ ಗೋಷ್ಠಿಗಳಲ್ಲಿ ಕ್ರಿಕೆಟ್‌– ರಾಜಕಾರಣ– ಸಾಹಿತ್ಯ ಹೂರಣದ ಸವಿ ಎಲ್ಲರದ್ದಾಗಿತ್ತು.

‘ಯೆಸ್‌ ಪ್ರೈಮ್‌ ಮಿನಿಸ್ಟರ್‌’ ಸಂವಾದದಲ್ಲಿ ಮಾತನಾಡಿದ ಸಾಗರಿಕಾ ಘೋಷ್‌, ‘50 ವರ್ಷ ಸಂಸತ್‌ ಸದಸ್ಯರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಆರ್‌ಎಸ್‌ಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ರಾಜಕಾರಣಿ. ಗುಜರಾತ್‌ ಗಲಭೆಯಾದಾಗ ಮೋದಿ ಅವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು. ಪಿ.ವಿ.ನರಸಿಂಹರಾವ್‌ರ ಆರ್ಥಿಕ ನೀತಿಗಳನ್ನು ಮುಂದುವರಿಸಿದ್ದರು. ಹೀಗಾಗಿಯೇ ಆರ್‌ಎಸ್‌ಎಸ್‌ ಅಂಗಸಂಸ್ಥೆಗಳು ಅವರನ್ನು ವಿರೋಧಿಸುತ್ತಿದ್ದವು’ ಎಂದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಸುಗತ ಶ್ರೀನಿವಾಸರಾಜು, ‘ಮಾನವೀಯತೆ, ಭಾಷಣ ಚಾತುರ್ಯವೆಲ್ಲವೂ ವಾಜಪೇಯಿ ವ್ಯಕ್ತಿತ್ವ. ಆದರೆ, ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಪ್ರೇರಿತವಾಗಿದ್ದ ಅವರು ಎಂದೆಂದಿಗೂ ಮಾತೃಸಂಸ್ಥೆಯನ್ನು ಬಿಟ್ಟುಕೊಟ್ಟಿರಲಿಲ್ಲ’ ಎಂದರು.

‘ಚರಣ್‌ಸಿಂಗ್‌, ಚಂದ್ರಶೇಖರ್‌, ವಿ.ಪಿ.ಸಿಂಗ್‌, ಎಚ್‌.ಡಿ.ದೇವೇಗೌಡ ಸೂಕ್ಷ್ಮ ಅರ್ಥಶಾಸ್ತ್ರ ತಜ್ಞರು. ಅವರ ಕೊಡುಗೆಗಳನ್ನು ಯಾರೂ ಸ್ಮರಿಸದಿರುವುದೇ ವಿಪರ್ಯಾಸ. ‌ಟಿಪ್ಪು ಸುಲ್ತಾನ್‌ನಂತೆ ದೇವೇಗೌಡರ ಕುರಿತೂ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ತಮ್ಮ ಧಾರ್ಮಿಕ ಶ್ರದ್ಧೆಯನ್ನು ರಾಜಕಾರಣಕ್ಕೆ ಅವರೆಂದೂ ಬಳಸಿಕೊಂಡಿಲ್ಲ’ ಎಂದು ಪ್ರತಿಪಾದಿಸಿದರು.

‘ದೇವೇಗೌಡ ಅಧಿಕಾರದಲ್ಲಿದ್ದದ್ದು ಕೆಲವೇ ವರ್ಷಗಳಷ್ಟೇ. ಆದರೆ, ಬಾಂಗ್ಲಾದೇಶ, ಕಾಶ್ಮೀರ, ಪಂಜಾಬ್‌ನ ಜನರು ನೆನೆಯುತ್ತಾರೆ. ಮಾಸ್‌ ಲೀಡರ್‌ಗಳ ಮಾಸ್‌ ಲೀಡರ್‌ ದೇವೇಗೌಡ. ಹೀಗಾಗಿಯೇ ಅವರನ್ನು ಮುಖ್ಯಮಂತ್ರಿ, ಪ್ರಧಾನಿ ಹುದ್ದೆಗಳಿಗೆ ಬಿಜು ಪಟ್ನಾಯಕ್‌ ಸೂಚಿಸಿದ್ದರು’ ಎಂದರು.

ರವಿ ಜೋಶಿ ಸಂವಾದ ನಡೆಸಿಕೊಟ್ಟರು.

‘ಕಪಿಲ್‌ನನ್ನು ಹುಚ್ಚನೆಂದು ಕರೆದಿದ್ದೆವು’

‘1983ರ ವಿಶ್ವಕಪ್‌ ವಿಜಯದ ಜೀವನಪಾಠಗಳು’ ಕುರಿತ ಗೋಷ್ಠಿಯಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌, ‘ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ನ ಲೀಗ್‌ನ ಮೊದಲ ಪಂದ್ಯವನ್ನೇ ಗೆಲ್ಲುತ್ತೇವೆಂದು ಕಪಿಲ್‌ ಹೇಳಿದಾಗ ನಾವೆಲ್ಲ ಹುಚ್ಚನೆಂದು ಕರೆದಿದ್ದೆವು. ಆದರೆ, ಆವೊಂದು ಗೆಲುವಿಂದ ಸಿಕ್ಕ ಆತ್ಮವಿಶ್ವಾಸ ಭಾರತ ಕ್ರಿಕೆಟ್‌ ದಿಕ್ಕನ್ನು ಬದಲಿಸಿತು’ ಎಂದರು.

‘ಗುರಿಯನ್ನು ಬೆಂಬತ್ತುವ ಛಲವನ್ನು ಕಪಿಲ್‌ದೇವ್‌, ವಿರಾಟ್‌ ಕೊಹ್ಲಿ ಅವರಿಂದ ಕಲಿಯಬೇಕು. ಕ್ರಿಕೆಟ್‌ ದಿಗ್ಗಜರೆಲ್ಲ ಮೊದಲ ದಿನಗಳಲ್ಲಿ ಜನಸಾಮಾನ್ಯರಂತೆ ಬಸ್‌, ರೈಲುಗಳಲ್ಲಿ ಓಡಾಡಿದ್ದಾರೆ. ಉಚಿತವಾಗಿ ಊಟ ಸಿಗುತ್ತದೆಂದರೆ ಆಗೆಲ್ಲ ನಾವೂ ದೌಡಾಯಿಸಿದ್ದೇವೆ. ಗಿಲ್ಲಿದಾಂಡು, ಬುಗರಿ ಆಡಿದ್ದೇವೆ. ನಡೆದು ಬಂದ ದಾರಿಯನ್ನು ಮರೆಯಬಾರದು’ ಎಂದು ಶ್ರೀಕಾಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.