ಮೈಸೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಾಡಹಬ್ಬ ದಸರೆಗಾಗಿ ವಿಶೇಷ ಕೊಡುಗೆ ನೀಡಿದೆ. ಕೇವಲ ₹ 50ಕ್ಕೆ ರಿಯಾಯಿತಿ ದರದ ಪಾಸ್ ನೀಡಿ ‘ದಸರಾ ದರ್ಶನ’ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೆ.
ಪ್ರವಾಸಿಗರಿಗೆ ದಸರಾ ತೋರಿಸುವ ಉದ್ದೇಶದಿಂದ ಈ ಸೇವೆ ಆರಂಭವಾಗಿದ್ದು, ಅ. 17ರವರೆಗೆ ಬಸ್ಗಳು ಸಂಚರಿಸಲಿವೆ. ಚಾಮುಂಡಿಬೆಟ್ಟ, ಮೃಗಾಲಯ, ಅರಮನೆಗೆ ಕರೆದೊಯ್ಯುವ ಈ ಬಸ್ಗಳು ಸುಲಭವಾಗಿ ದರ್ಶನ ಮಾಡಿಸಲು ಸಂಕಲ್ಪ ತೊಟ್ಟಿವೆ.
ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ 31 ತಾಲ್ಲೂಕುಗಳಿಂದ 174 ವಾಹನಗಳಲ್ಲಿ ಒಟ್ಟು 9,570 ನಾಗರಿಕರು ದಸರಾ ಕಣ್ತುಂಬಿಕೊಳ್ಳಬಹುದಾಗಿದೆ. ಇವರಿಗೆ ಸರ್ಕಾರವು ಟಿಕೆಟ್ಗಳನ್ನು ಪ್ರಾಯೋಜಿಸಿದೆ. ಮೈಸೂರಿಗೆ ಬಂದ ಮೇಲೆ ದಸರಾ ದರ್ಶನ ಭಾಗ್ಯ ಇವರಿಗೆ ಸಿಗಲಿದೆ.
‘ದಸರಾ ನೋಡಿರದ ಮಹಿಳೆಯರು, ವೃದ್ಧರು, ಆರ್ಥಿಕವಾಗಿ ಹಿಂದುಳಿದ ಜನರನ್ನು ಕರೆತಂದು ಅವರಿಗೆ ದರ್ಶನ ಮಾಡಿಸುವುದು ಉದ್ದೇಶ. ಇದಕ್ಕಾಗಿ ಎಲ್ಲ ತಹಶೀಲ್ದಾರರಿಗೆ ಕೋರಲಾಗಿದೆ. ಅವರು ತಮ್ಮ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಿಂದ ಪ್ರವಾಸಿಗರನ್ನು ಕರೆತರುತ್ತಾರೆ. ನಗರ ಪ್ರದೇಶದ ಬಡ ಮಧ್ಯಮ ವರ್ಗದ ನಾಗರಿಕರೂ ದಸರೆಯನ್ನು ಸಾರಿಗೆ ಸಂಸ್ಥೆಯ ಬಸ್ಗಳ ಮೂಲಕ ವೀಕ್ಷಿಸಲು ಸಾಧ್ಯವಾಗುತ್ತಿದೆ’ ಎಂದು ಕೆಎಸ್ಆರ್ಟಿಸಿಯ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ‘ಪ್ರಜಾವಾಣಿ’ಗೆ ತಿಳಿಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಭಾಗವಹಿಸಿದ್ದರು.
ದಸರಾ ದರ್ಶನ ಅಂಕಿ–ಅಂಶ
ಜಿಲ್ಲೆ ತಾಲ್ಲೂಕು ಒಟ್ಟು ಬಸ್ ಒಟ್ಟು ಪ್ರಯಾಣಿಕರು
ಮೈಸೂರು 8 42 2,310
ಚಾಮರಾಜನಗರ 5 24 1,320
ಮಂಡ್ಯ 7 42 2,310
ಹಾಸನ 8 48 2,640
ಕೊಡಗು 3 18 990
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.