ಮೈಸೂರು/ಮಂಡ್ಯ: ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರನ್ನು ರಾಮನಗರದ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಕ್ಕೆ ಬಂದೀಖಾನೆ ಡಿಜಿಪಿ ಅಲೋಕ್ ಮೋಹನ್ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
‘ನಾನು ಮುಖ್ಯಮಂತ್ರಿ ಆಗಿದ್ದಾಗ ಅಲೋಕ್ ಮೋಹನ್ ಬೆಂಗಳೂರು ಕಮಿಷನರ್ ಹುದ್ದೆ ಬಯಸಿದ್ದರು. ಈತನ ಬಗ್ಗೆ ಗೊತ್ತಿದ್ದರಿಂದಲೇ ನಾನು ಅವಕಾಶ ಕೊಡಲಿಲ್ಲ. ನನ್ನ ಮೇಲಿನ ದ್ವೇಷಕ್ಕಾಗಿ ಈಗ ರಾಮನಗರ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದಾರೆ’ ಎಂದು ಆಪಾದಿಸಿದ ಅವರು, ಈ ಬಗ್ಗೆ ತನಿಖೆಯಾಗಬೇಕು ಎಂದು ಶುಕ್ರವಾರ ಇಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ತುಘಲಕ್ ಸರ್ಕಾರವಿದೆ. ಕೋವಿಡ್ ಪೀಡಿತರನ್ನು ಸ್ಥಳಾಂತರಿಸಿ ಹುಡುಗಾಟ ಪ್ರದರ್ಶಿಸಿದೆ. ಕೋವಿಡ್ ಸಂಕಷ್ಟದಲ್ಲೂ ಕೊಳ್ಳೆ ಹೊಡೆಯುವ ಕೆಲಸ ನಡೆದಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.