ಮೈಸೂರು: ಸೃಜನಶೀಲ ಬರಹಗಾರರಿಗೆ ಕುಮಾರವ್ಯಾಸ ಮಾದರಿ ಎಂದು ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.
ತನು ಮನ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಕಲಾಕೂಟವು ಪ್ರೊ.ಎಸ್.ಎಲ್.ಭೈರಪ್ಪ ಮನೆ ಆವರಣಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅವರ ‘ಕುಮಾರವ್ಯಾಸ ವಿರಚಿತ ಗದುಗಿನ ಭಾರತ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಲ್ಲ ರಸಗಳು ಕುಮಾರವ್ಯಾಸನ ಸಾಹಿತ್ಯದಲ್ಲಿ ಅಡಕವಾಗಿವೆ. ಎಲ್ಲ ಕವಿಗಳಿಗೂ ಅವನೇ ಗುರು. ಕುಮಾರವ್ಯಾಸನ ಜನಪ್ರಿಯತೆ ಅಜರಾಮರ. ಅವನ ಕಾವ್ಯದಲ್ಲಿ ರೂಪಕ, ರಸದ ಹದವಿದೆ. ‘ಕರ್ಣಾಟ ಭಾರತ ಕಥಾಮಂಜರಿ’ಯಂತಹ ಕೃತಿಯು ಕನ್ನಡದಲ್ಲಿ ಮತ್ತೊಂದು ಬಂದಿಲ್ಲ ಎಂದು ವಿಶ್ಲೇಷಿಸಿದರು.
ಕುಮಾರವ್ಯಾಸ ಭಾರತ ಕಾವ್ಯದ ಮೊದಲ ಆವೃತ್ತಿಯನ್ನು ಹೊರತಂದ ಕೀರ್ತಿ ಹನುಮಂತಯ್ಯ ಅವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಅವರೇ ಸ್ಥಾಪಿಸಿದರು. ಈಗಿನ ಎಷ್ಟೋ ವಿಮರ್ಶಕರು, ಕುಮಾರವ್ಯಾಸ ವಾಚಾಳಿ, ಕಾವ್ಯದಲ್ಲಿ ಅನವಶ್ಯಕ ಪುನರಾವರ್ತನೆ, ವಿವರ, ರೂಪಕ ಬಳಸಿದ್ದಾರೆ ಎಂದುನಕಾರಾತ್ಮಕವಾಗಿ ವಿಮರ್ಶೆ ಮಾಡುತ್ತಾರೆ. ಈ ರೀತಿಯ ತಾಂತ್ರಿಕ ವಿಚಾರಗಳನ್ನು ದೊಡ್ಡದು ಮಾಡುವುದಕ್ಕಿಂತ, ಕಾವ್ಯದ ರಸವನ್ನು ಆಸ್ವಾದಿಸಬೇಕು ಎಂದು ಸಲಹೆ ನೀಡಿದರು.
ಸಿಪಿಕೆ ಅವರ ವಿಮರ್ಶಾ ಕೃತಿಯು ಶ್ರೇಷ್ಠವಾಗಿದೆ. ಸರ್ಕಾರವು ಇಂತಹ ಕೃತಿಗಳನ್ನು ಲಕ್ಷಗಟ್ಟಲೇ ಮುದ್ರಿಸಿ ಮನೆ ಮನೆಗೆ ತಲುಪಿಸಬೇಕು ಎಂದರು.
ಲೇಖಕ ಸಿಪಿಕೆ ಮಾತನಾಡಿ, ಕುಮಾರವ್ಯಾಸನ ಸಾಹಿತ್ಯ ಎಷ್ಟು ಶ್ರೇಷ್ಠವೋ ಅಷ್ಟೇ ಜನಪ್ರಿಯವೂ ಹೌದು. ಆತನನ್ನು ಇಂಗ್ಲಿಷ್ನಲ್ಲಿ ಷೇಕ್ಸ್ಪಿಯರ್ಗೆ ಹೋಲಿಸಬಹುದು. ಅಂತೆಯೇ, ಅವನ ಗದ್ಯಾನುವಾದ ಬಹಳ ಕಷ್ಟ ಎಂದು ಅನುಭವ ಹಂಚಿಕೊಂಡರು.
ವಿಮರ್ಶಕ ಪ್ರಧಾನ ಗುರುದತ್ತ ಮಾತನಾಡಿದರು. ಪ್ರಕಾಶಕ ಮಾನಸ, ರಂಗಕರ್ಮಿ ರಾಜಶೇಖರ ಕದಂಬ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.