ADVERTISEMENT

ಲಲಿತಾದ್ರಿಪುರ: ಕಾಯಕಲ್ಪಕ್ಕೆ ಕಾದ ಕಟ್ಟೆಗಳು!

‘ಸಿದ್ಧಪ್ಪನ ಕಟ್ಟೆ’ ಕಾಂಕ್ರೀಟೀಕರಣ, ಜನರ ಕಣ್ಣಿಗೆ ಕಾಣದ ‘ವಡ್ಡರ ಕಟ್ಟೆ’– ತ್ಯಾಜ್ಯ ಸುರಿವ ತಾಣ

ಮೋಹನ್ ಕುಮಾರ ಸಿ.
Published 25 ಜೂನ್ 2025, 7:09 IST
Last Updated 25 ಜೂನ್ 2025, 7:09 IST
ಮೈಸೂರಿನ ಲಲಿತಾದ್ರಿಪುರ ಗ್ರಾಮದಲ್ಲಿರುವ ಸಿದ್ಧಪ್ಪನ ಕಟ್ಟೆಯಲ್ಲಿ ನಡಿಗೆ ಪಥ ನಿರ್ಮಿಸಲು ಸಿಮೆಂಟ್‌ ಟೈಲ್ಸ್‌ ಬಳಸಲಾಗಿದೆ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಮೈಸೂರಿನ ಲಲಿತಾದ್ರಿಪುರ ಗ್ರಾಮದಲ್ಲಿರುವ ಸಿದ್ಧಪ್ಪನ ಕಟ್ಟೆಯಲ್ಲಿ ನಡಿಗೆ ಪಥ ನಿರ್ಮಿಸಲು ಸಿಮೆಂಟ್‌ ಟೈಲ್ಸ್‌ ಬಳಸಲಾಗಿದೆ –ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.   

ಮೈಸೂರು: ಚಾಮುಂಡಿ ಬೆಟ್ಟದ ‍ಪೂರ್ವಭಾಗದ ತಪ್ಪಲಿನುದ್ದಕ್ಕೂ ಚಾಚಿರುವ ಲಲಿತಾದ್ರಿಪುರ ಗ್ರಾಮ ಜಲಮೂಲಗಳ ತಾಣ. ಬೆಟ್ಟದಿಂದ ಓಡುವ ತೊರೆಗಳಿಗೆ ಇಲ್ಲಿ ಕುಂಟೆ, ಕಟ್ಟೆ– ಕೆರೆಗಳನ್ನು ಕಟ್ಟಲಾಗಿದೆ. 

ಗ್ರಾಮದಲ್ಲಿ ವಡ್ಡರ ಕಟ್ಟೆ, ಸಿದ್ಧಪ್ಪನ ಕಟ್ಟೆ ಹಾಗೂ ಕೆಂಪೇಗೌಡನ ಕಟ್ಟೆಗಳಿದ್ದು (ಕೆಂಪುರ ಕಟ್ಟೆ), ಒಂದುಕಾಲದಲ್ಲಿ ಜನರ ಕುಡಿಯುವ ನೀರಿನ ಮೂಲವಾಗಿದ್ದವು. ಗ್ರಾಮದ ಬೀದಿಗಳಲ್ಲಿದ್ದ ಬಾವಿಗಳು ಬೇಸಿಗೆಯಲ್ಲೂ ಬತ್ತದಿರುವುದಕ್ಕೆ ಕಟ್ಟೆಗಳೇ ಕಾರಣವಾಗಿದ್ದವು. ಮಳೆ ನೀರನ್ನು ಇಂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇವು ಮಳೆಗಾಲದಲ್ಲೂ ನೀರು ಹರಿದು ಬರುತ್ತಿಲ್ಲ. 

ಲಲಿತಾದ್ರಿಪುರದಲ್ಲಿ ಬಡಾವಣೆಗಳು ವಿಸ್ತರಣೆಯಾದಂತೆ, ಕಾವೇರಿ, ಕಬಿನಿ ನದಿಯಿಂದ ಕುಡಿಯುವ ನೀರು ಪೂರೈಕೆಯಾದ ನಂತರ ಕಟ್ಟೆಗಳಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ. ಕಾಯಕಲ್ಪದ ನಿರೀಕ್ಷೆಯಲ್ಲಿರುವ ಇವು ಜಿಲ್ಲಾಡಳಿತಕ್ಕೆ ‘ಶಬರಿ’ಯಂತೆ ಕಾದು ನಿಂತಿವೆ. 

ADVERTISEMENT

ಕಾಂಕ್ರೀಟೀಕರಣ: ಸಿದ್ದಪ್ಪನ ಕಟ್ಟೆಯೀಗ ಅಭಿವೃದ್ಧಿ ಕಾಣುತ್ತಿದ್ದು, ಕಟ್ಟೆ ಪಕ್ಕದಲ್ಲಿ ವಾಯುವಿಹಾರಿಗಳಿಗೆ ನಡಿಗೆ ಪಥ ನಿರ್ಮಿಸಲಾಗಿದೆ. ‘ಹೆಬ್ಬಾಳ ಕೆರೆ’ ಮಾದರಿಯಲ್ಲಿ ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಜಾರಿದ್ದ ಕಟ್ಟೆಯ ಮಣ್ಣನ್ನು ತೆಗೆದು, ಕಲ್ಲುಗಳಿಂದ ಬದುಗಳನ್ನು ನಿರ್ಮಿಸಲಾಗಿದೆ.

‘ಬದುಗಳನ್ನು ನಿರ್ಮಿಸಲು ಸಿಮೆಂಟ್‌– ಗಾರೆಯನ್ನು ಬಳಸಿಲ್ಲ. ಆದರೆ, ನಡಿಗೆ ಪಥಕ್ಕೆ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಪರಿಸರಸ್ನೇಹಿ ಅಭಿವೃದ್ಧಿ ಅಗತ್ಯವಾಗಿತ್ತು’ ಎನ್ನುತ್ತಾರೆ ಗ್ರಾಮದ ಮಾದೇಶ. 

ಸಿದ್ದಪ್ಪನ ಕಟ್ಟೆಯು ಮಳೆಗಾಲದಲ್ಲಿ ತುಂಬಿದ್ದು, ಬೇಸಿಗೆಯಲ್ಲಿ ಬತ್ತಿಹೋಗುತ್ತದೆ. ಇದರ ವಿಸ್ತೀರ್ಣ 1.24 ಎಕರೆಯಿದ್ದು, ಲಲಿತಾದ್ರಿಪುರ ಗ್ರಾಮದ ಸರ್ವೆ ಸಂಖ್ಯೆ 215ರಲ್ಲಿದೆ. ಕಟ್ಟೆಯ ಸುತ್ತ ಬಡಾವಣೆಗಳು ಏಳುತ್ತಿವೆ. ಈ ಹಿಂದೆ ರಸ್ತೆ ವಿಸ್ತರಣೆಗೆ ಕಟ್ಟೆಯ ಭಾಗವನ್ನು ಒತ್ತುವರಿ ಮಾಡಲಾಗಿತ್ತು. ಪಕ್ಕದಲ್ಲಿಯೇ ಬಸ್‌ ನಿಲ್ದಾಣವೂ ಇದೆ.

ಕಾಣದ ವಡ್ಡರ ಕಟ್ಟೆ: ಸಿದ್ಧಪ್ಪನ ಕಟ್ಟೆಯ ಸಮೀಪದಲ್ಲಿಯೇ ವಡ್ಡರ ಕಟ್ಟೆಯಿದ್ದು, ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ. ಸುತ್ತಲೂ ಬಡಾವಣೆಗಳು ನಿರ್ಮಾಣಗೊಂಡಿದ್ದು, ಕಾಲುದಾರಿಯಲ್ಲಿಯೇ ಹೊಕ್ಕಿ ನೋಡಬೇಕಿದೆ. 

ಸರ್ವೆ ಸಂಖ್ಯೆ 14ರಲ್ಲಿರುವ ಕಟ್ಟೆಯ ವಿಸ್ತೀರ್ಣ 1.05 ಎಕರೆಯಾಗಿದ್ದು, ಒಂದು ಕಾಲದಲ್ಲಿ ಕಟ್ಟೆಯು ನೈದಿಲೆಗಳು, ಬಾನಾಡಿಗಳಿಂದ ತುಂಬಿ ತುಳುಕುತ್ತಿತ್ತು. ಇದೀಗ ಮಳೆಗಾಲದಲ್ಲೂ ನೀರು ತುಂಬದಂತೆ ಕಟ್ಟೆಯ ಒಂದು ಭಾಗವನ್ನು ಕಿರಿದಾಗಿಸಲಾಗಿದೆ. ಕಟ್ಟೆಯತ್ತ ಹರಿದು ಬರುತ್ತಿದ್ದ ತೊರೆಯ ಜೀವಸೆಲೆ ಅಲ್ಲಿಗೆ ಹರಿಯದಂತೆ ಮುಚ್ಚಲಾಗಿದೆ. ಕಟ್ಟೆ ಯಾರಿಗೂ ಕಾಣದ್ದರಿಂದ ಸುತ್ತಮುತ್ತಲ ನಿವಾಸಿಗಳು, ಕಟ್ಟಡ ತ್ಯಾಜ್ಯ, ಮಣ್ಣನ್ನು ಸುರಿಯುವ ತಾಣವಾಗಿಸಿಕೊಂಡಿದ್ದಾರೆ. 

ವಡ್ಡರಕಟ್ಟೆ ತ್ಯಾಜ್ಯ ಸುರಿವ ತಾಣವಾಗಿದೆ –  ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.