ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ಕೇಂದ್ರದ ಪಕ್ಕದಲ್ಲಿನ ಲೀಲಾ ಎಚ್.ಚನ್ನಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯುತ್ತಿದ್ದ ಮದುವೆ ಸಮಾರಂಭವು ಜನರಿಲ್ಲದೇ ಭಣಗುಡುತ್ತಿತ್ತು.
ಎಣಿಕೆ ಕೇಂದ್ರ ಇರುವ ವಾಲ್ಮೀಕಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಇದರಿಂದ ಜನರು ವಾಹನದಲ್ಲಿ ಬರುವುದಕ್ಕೆ ಅಡ್ಡಿಯಾಯಿತು. ಸ್ವಲ್ಪ ದೂರದಲ್ಲೇ ವಾಹನ ನಿಲ್ಲಿಸಿ ನಡೆದು ಹೋಗಲು ಪೊಲೀಸರು ಅನುಮತಿ ನೀಡಿದ್ದರು.
ಆದರೆ, ಮದುವೆ ಮಂಟಪದತ್ತ ಹೆಚ್ಚಾಗಿ ಜನರು ಸುಳಿಯಲಿಲ್ಲ. ‘1,500 ಮಂದಿಗೆ ಅಡುಗೆ ಮಾಡಿಸಿದ್ದೆವು. ಮಧ್ಯಾಹ್ನ 1 ಗಂಟೆಯವರೆಗೆ ಕೇವಲ 300 ಮಂದಿ ಮಾತ್ರ ಬಂದಿದ್ದಾರೆ. ಚುನಾವಣೆ ಘೋಷಣೆಯಾಗುವುದಕ್ಕೆ ಮುಂಚೆಯೇ ಕಲ್ಯಾಣ ಮಂಪಟವನ್ನು ಕಾಯ್ದಿರಿಸಿದ್ದೆವು. ಭದ್ರತಾ ಕಾರಣಗಳಿಗೆ ಜನರು ಬರುವುದಕ್ಕೆ ಇದು ತೊಡಕಾಗುತ್ತಿದೆ’ ಎಂದು ವಧುವಿನ ಸಂಬಂಧಿಕರಾದ ರಾಜಾರಾಂ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ‘ಬುಧವಾರವಿದ್ದ ಮದುವೆಯ ಆರತಕ್ಷತೆ ಸಮಾರಂಭಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ ಮಾಹಿತಿ ಮೊದಲೇ ಗೊತ್ತಿದ್ದುದರಿಂದ ಜನರು ಹಿಂದಿನ ದಿನವೇ ಸಮಾರಂಭಕ್ಕೆ ಬಂದಿದ್ದಾರೆ. ಮದುವೆಗೆ ಬಂದವರು, ಭದ್ರತಾ ತಪಾಸಣೆಗೆ ಒಳಗಾಗಿ ಸ್ವಲ್ಪ ದೂರದಲ್ಲೇ ವಾಹನ ನಿಲ್ಲಿಸಿ ಬರಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.