ADVERTISEMENT

ನಶಿಸುವ ಆತಂಕದಲ್ಲಿ ಬಿದಿರು ಬುಟ್ಟಿ ಹೆಣೆಯುವ ಕಾಯಕ

ಬುಟ್ಟಿ ಹೆಣೆಯುವ ಕಾಯಕದಲ್ಲಿ 100 ಕುಟುಂಬಗಳು; ಕಸುಬು ತೊರೆಯುವ ಹಾದಿಯಲ್ಲಿ ಮೇದಾರ

ಬಿ.ಆರ್.ಗಣೇಶ್
Published 3 ಫೆಬ್ರುವರಿ 2019, 5:32 IST
Last Updated 3 ಫೆಬ್ರುವರಿ 2019, 5:32 IST
   

ಪಿರಿಯಾಪಟ್ಟಣ: ಬಿದಿರು ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿರುವುದರಿಂದ ಬುಟ್ಟಿ ಹೆಣೆದು ಜೀವನದ ಬಂಡಿ ಸಾಗಿಸುತ್ತಿರುವವರ ಸ್ಥಿತಿ ಅತಂತ್ರವಾಗಿದೆ. ಅವರು ಕುಲಕಸುಬನ್ನು ತೊರೆಯುವ ಅನಿವಾರ್ಯ ಸೃಷ್ಟಿಯಾಗಿದೆ.

ಪಟ್ಟಣದ ಮೇದಾರ್ ಬ್ಲಾಕ್‌ನಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಸುಮಾರು 60 ವರ್ಷಗಳಿಂದ ಬಿದಿರಿನಿಂದ ಬುಟ್ಟಿ, ಪಂಜರ, ಬೀಸಣಿಗೆ, ಮೊರ, ಮಂಕರಿ, ಹೆಜ್ಜಿಗೆ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಬಿದಿರು ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದ ನೂರಾರು ಕುಟುಂಬಗಳ ಆದಾಯಕ್ಕೆ ಕತ್ತರಿ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಬಿದಿರು ಸಿಗುತ್ತಿಲ್ಲ. ಕೊಡಗು ಜಿಲ್ಲೆಯ ಭಾಗಮಂಡಲದಿಂದ ದುಪ್ಪಟು ಹಣ ಕೊಟ್ಟು ಬಿದಿರನ್ನು ತರಿಸಿಕೊಳ್ಳ ಬೇಕಾಗಿದೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡ ಬೇಕಾದ ಸ್ಥಿತಿ ಇದೆ.

ADVERTISEMENT

ಈ ಕುಟುಂಬಗಳ ಯುವಕರು ಕುಲಕಸುಬಾದ ಬುಟ್ಟಿ ಹೆಣೆಯುವುದನ್ನು ಬಿಟ್ಟು, ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ದಿನಕ್ಕೆ ₹200ರಿಂದ ₹300 ಕೂಲಿ ಸಂಪಾದನೆ ಮಾಡಿ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯಿಂದ ಉಚಿತವಾಗಿ ಬಿದಿರನ್ನು ವಿತರಿಸಲಾಗುತ್ತಿತ್ತು. ಆದರೆ, 2 ವರ್ಷಗಳಿಂದ ಬಿದಿರು ಪೂರೈಸುತ್ತಿಲ್ಲ. ಬಿದಿರು ಸಿಗದೆ, ಬೇರೆ ಕೆಲಸವೂ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರೋತ್ಸಾಹಧನ ಕೊಡಿ: ಬುಟ್ಟಿ ಹೆಣೆಯುವ ಕಾಯಕವನ್ನು ಅವಲಂಬಿ ಸಿರುವ ಕುಟುಂಬಗಳಿಗೆ ಸರ್ಕಾರವು ಪ್ರೋತ್ಸಾಹಧನ ನೀಡಬೇಕು. ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಪ್ರತಿ ವರ್ಷ ಕನಿಷ್ಠ ₹50 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಸರ್ಕಾರವು ಯಾವುದೇ ಸಾಲ-ಸೌಲಭ್ಯ ಕೊಡುತ್ತಿಲ್ಲ. ಸಂಸಾರ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟವಾಗಿದೆ. ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ನಮ್ಮ ಜೀವನ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಬಿದಿರನ್ನು ಉಚಿತವಾಗಿ ಪೂರೈಸಬೇಕು ಎಂದು ಗೀತಾ ಆಗ್ರಹಿಸಿದರು.

ಪ್ರತಿ ಕುಟುಂಬಕ್ಕೆ 6 ಬಿದಿರು ಬೊಂಬು

ಮೇದಾರ್‌ ಬ್ಲಾಕ್‌ ನಿವಾಸಿ ಮಂಟಯ್ಯ ಅವರು ಕೊಡಗು ಜಿಲ್ಲೆಯಿಂದ ಬಿದಿರು ಬೊಂಬುಗಳನ್ನು ತರಿಸಿಸುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ 6 ಬೊಂಬುಗಳನ್ನು ₹1,200ಕ್ಕೆ ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆಗೆ ಬೊಂಬು ಸಿಗುತ್ತಿರುವುದರಿಂದ ನಿವಾಸಿಗಳಿಗೆ ಅನುಕೂಲವಾಗುತ್ತಿದೆ. ಇಲ್ಲಿನವರು ತಯಾರಿಸುವ ಬಿದಿರು ವಸ್ತುಗಳನ್ನು ಪಿರಿಯಾಪಟ್ಟಣ, ಕುಶಾಲನಗರ, ಕೊಣನೂರು, ಬೆಟ್ಟದಪುರ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.