ನಂಜನಗೂಡು: ತಾಲ್ಲೂಕಿನ ಕಾರ್ಯ ಗ್ರಾಮದ ಗುರುಸ್ವಾಮಿ ಎಂಬವರಿಗೆ ಸೇರಿದ ಜಮೀನಿನಲ್ಲಿ ಮಂಗಳವಾರ ರಾತ್ರಿ ಮೊಲ ಬೇಟೆಯಾಡಲು ಬಂದೂಕಿನಿಂದ ಹಾರಿಸಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕೇರಳ ರಾಜ್ಯದ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಪಾಡಿಚರ ಗ್ರಾಮದ ಪ್ರಸನ್ನನ್ (58) ಮೃತಪಟ್ಟವರು.
ಕೇರಳ ಮೂಲದವರು ಗುರುಸ್ವಾಮಿ ಅವರ ಜಮೀನನ್ನು 2 ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದಿದ್ದು, 2 ವರ್ಷಗಳಿಂದ ಈ ಜಮೀನಿನಲ್ಲಿ ಪ್ರಸನ್ನನ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಪಕ್ಕದ ಜಮೀನಿಂದ ಊಟ ಮಾಡಲು ತೆರಳಿದ್ದ ವೇಳೆ, ನಿಶಾದ್ ಎಂಬಾತ ಹಾರಿಸಿದ ಗುಂಡು ಪ್ರಸನ್ನನ್ ಕಾಲಿಗೆ ತಗು ಲಿದೆ. ರಕ್ತಸ್ರಾವದಿಂದ ಬಳಲಿದ್ದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿ ಸಿದ್ದು, ಪರೀಕ್ಷಿಸಿದ ವೈದ್ಯರು ಪ್ರಸನ್ನನ್ ಮೃತ ಪಟ್ಟಿರುವುದನ್ನು ಧೃಡಪಡಿಸಿದರು.
ಈ ಬಗ್ಗೆ ಪ್ರಸನ್ನನ್ ಸಹೋದರ ಸುರೇಂದ್ರ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಎಸ್ಪಿ ಶಿವಕುಮಾರ್, ಸಿಪಿಐ ಲಕ್ಷ್ಮೀಕಾಂತ್ ತಳವಾರ್, ಪಿಎಸ್ಐ ರಾಘವೇಂದ್ರ ಕಠಾರಿಯ ಮಹಜರು ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.