ADVERTISEMENT

ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಶಾಸಕ ಅಶ್ವಿನ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:15 IST
Last Updated 19 ಜೂನ್ 2021, 4:15 IST
ಅಶ್ವಿನ್‌
ಅಶ್ವಿನ್‌   

ತಿ.ನರಸೀಪುರ: ಶಾಸಕ ಸಾ.ರಾ.‌ಮಹೇಶ್ ಅವರ ವಿರುದ್ಧ ಭೂಕಬಳಿಕೆ ಆರೋಪ‌‌ ಹೊರಿಸಿ ತೇಜೋವಧೆ ಮಾಡಿರುವ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಸರ್ಕಾರ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುವಂತೆ ಶಾಸಕ‌ ಎಂ.‌ಅಶ್ವಿನ್ ಕುಮಾರ್ ಒತ್ತಾಯಿಸಿದರು.‌

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾಹಿತಿ ಕೊರತೆಯಿಂದ ರೋಹಿಣಿ ಸಿಂಧೂರಿ ಅವರು ಶಾಸಕರ ವಿರುದ್ಧ ಭೂ ಕಬಳಿಕೆ ಆಪಾದನೆ ಮಾಡಿದ್ದಾರೆ. ಅವರ ಆರೋಪದ ಬಗ್ಗೆ ಸರ್ಕಾರ ವರದಿ ಪಡೆದಿದೆ. ಈಗಿನ ಜಿಲ್ಲಾಧಿಕಾರಿಯೇ ವರದಿ ನೀಡಿದ್ದು, ವರದಿಯಲ್ಲಿ ಸಾ.ರಾ.ಮಹೇಶ್ ಅವರು ತಪ್ಪಿತಸ್ಥರಲ್ಲ ಎಂದಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವುದು ಪ್ರತಿಷ್ಠೆ ಮತ್ತು ಗೌರವ‌. ಆದರೆ, ರೋಹಿಣಿ ಅವರು ಜನಪ್ರತಿನಿಧಿಗಳನ್ನು ಖಳನಾಯಕರಂತೆ ಬಿಂಬಿಸಿದ್ದಾರೆ. ಸಕಾರಣವಿಲ್ಲದೆ ಶಾಸಕರ ವಿರುದ್ಧ ಆರೋಪ ಮಾಡಿ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿಕೊಂಡಿದ್ದಾರೆ ಎಂದು ಸಾ.ರಾ.ಮಹೇಶ್‌ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದರು.

ADVERTISEMENT

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಶಯ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ರೋಹಿಣಿ ಸಿಂಧೂರಿ ಸಾಕ್ಷಿ ಸಮೇತ ಮಾತನಾಡಬೇಕು. ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.