ADVERTISEMENT

ಬಹುತ್ವ ನಾಶಗೊಳಿಸುತ್ತಿರುವ ಪ್ರಧಾನಿ: ಕಾಂಗ್ರೆಸ್‌ ಮುಖಂಡ ಮಣಿಶಂಕರ್ ಅಯ್ಯರ್

ಮೋಹನ್ ಕುಮಾರ ಸಿ.
Published 7 ಜುಲೈ 2025, 0:31 IST
Last Updated 7 ಜುಲೈ 2025, 0:31 IST
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮಾತನಾಡಿದರು. ಅರುಣ್ ರಾಮನ್ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮಾತನಾಡಿದರು. ಅರುಣ್ ರಾಮನ್ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಕಳೆದ 11 ವರ್ಷದಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿರುವ ಅತಿ ಕೆಟ್ಟ ಪ್ರಧಾನಿ. ಬಹುತ್ವವನ್ನು ನಾವು ಕಾಪಾಡದಿದ್ದರೆ ದೇಶದ ಭವಿಷ್ಯವೇ ಸರ್ವನಾಶವಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್ ಅಯ್ಯರ್ ಕಳವಳ ವ್ಯಕ್ತಪಡಿಸಿದರು. 

ಇಲ್ಲಿನ ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ ಹಾಗೂ ‘ಮೈಸೂರು ಬುಕ್ಸ್‌ ಕ್ಲಬ್ಸ್‌’ ಆಯೋಜಿಸಿದ್ದ 9ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ದ ಭಾನುವಾರದ ಗೋಷ್ಠಿಯಲ್ಲಿ ಮಾತನಾಡಿದರು. 

‘ಮೋದಿ ದೇಶದ ಬಹುತ್ವ ನಾಶಪಡಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ದೇಶದ 3ನೇ ಒಂದರಷ್ಟು ಜನರು ಮಾತ್ರ ಮೋದಿ ಅವರಿಗೆ ಮತ ನೀಡಿದ್ದಾರೆ. ಶೇ 66ರಷ್ಟು, ಅಂದರೆ ಹಿಂದೂಗಳ ಅರ್ಧದಷ್ಟು ಜನರು ಒಂದು ಧರ್ಮ, ಒಂದು ಭಾಷೆ, ಒಂದು ದೇಶವನ್ನು ನಿರ್ಮಿಸುವವರನ್ನು ತಿರಸ್ಕರಿಸಿದ್ದಾರೆ’ ಎಂದು ತಿಳಿಸಿದರು. 

‘ಈಗಿನ ಬಹುತ್ವದ ಭಾರತ ಉಳಿಸಲು ದೇಶದ ಜನರು ವೈವಿಧ್ಯಮಯ ಭಾಷೆ, ಧರ್ಮ, ಸಂಸ್ಕೃತಿಯನ್ನು ಪರಸ್ಪರ ಗೌರವಿಸಬೇಕು. ಕೋಮುವಾದದ ಹಾವನ್ನು ಮನೆಯೊಳಗೆ ಬಿಟ್ಟುಕೊಳ್ಳಬಾರದು’ ಎಂದು ಎಚ್ಚರಿಸಿದರು.

‘ಕಳೆದ 700 ವರ್ಷಗಳಿಂದ ಹಿಂದೂ– ಮುಸ್ಲಿಮರು ಜೊತೆಯಲ್ಲಿಯೇ ಬದುಕಿದ್ದಾರೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಒಡೆಯರ್‌ ಅವರ ಜೊತೆಗೇ ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್ ಜನರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ದೇಶವು ಹಿಂದೂ ಧರ್ಮೀಯರಿಗೆ ಮಾತ್ರ ಸೇರಿದ್ದಲ್ಲ. 20 ಕೋಟಿಯಷ್ಟಿರುವ ಮುಸ್ಲಿಮರು, ಆದಿವಾಸಿಗಳು, ಕ್ರೈಸ್ತ್ರರು, ಸಿಖ್ಖರಿಗೂ ಸೇರಿದ್ದು’ ಎಂದರು. 

ಸಾಹಿತ್ಯ ಸಂಭ್ರಮಕ್ಕೆ ತೆರೆ: ಎರಡು ದಿನ ನಡೆದ ‘ಮೈಸೂರು ಸಾಹಿತ್ಯ ಸಂಭ್ರಮ’ಕ್ಕೆ ವೈಭವದ ತೆರೆ ಬಿತ್ತು. ಲೋಕೇಶ್‌ ಮೊಸಳೆ, ಸ್ಟೀಫನ್ ಆಫ್ಟರ್ ಅವರ ಕಾಡಿನ ಕಥೆಗಳು, ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ– ಹಳ್ಳಿ ಹಂಬಲ, ವನಮಾಲಾ ವಿಶ್ವನಾಥ್‌, ಕೆ.ಎನ್‌.ಗಣೇಶಯ್ಯ, ಪ್ರೊ.ಬಿ.ಎನ್‌.ಶ್ರೀರಾಮ, ಅಬ್ದುಲ್ ರಶೀದ್‌ ಅವರ ಮಾತುಗಳಿಗೆ ಪ್ರೇಕ್ಷಕರು ಕಿವಿಯಾದರು. 

‘ತುರ್ತು ಪರಿಸ್ಥಿತಿ ಕ್ಷಮಿಸಲಾಗದು’

‘ಭಾರತ ಕಂಡ ಶ್ರೇಷ್ಠ ಪ್ರಧಾನಿಗಳ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಕೊಡುತ್ತೀರಿ’ ಎಂಬ ಲೇಖಕ ಅರುಣ್ ರಾಮನ್ ಪ್ರಶ್ನೆಗೆ ಉತ್ತರಿಸಿದ ಮಣಿಶಂಕರ್ ‘ಜವಾಹರಲಾಲ್‌ ನೆಹರೂ ಶ್ರೇಷ್ಠ ಪ್ರಧಾನಿ ರಾಜೀವ್‌ಗಾಂಧಿ ಲಾಲ್‌ಬಹದ್ದೂರ್ ಶಾಸ್ತ್ರಿ ನರಸಿಂಹರಾವ್ ವಾಜಪೇಯಿ ಐ.ಕೆ.ಗುಜ್ರಾಲ್ ಅವರಿಗೆ ನಂತರದ ಸ್ಥಾನ ಕೊಡುವೆ’ ಎಂದರು.  ‘32 ವರ್ಷದ ಕಿರಿಯ ಸಂಸದ ಅಟಲ್‌ ಅವರನ್ನು ಭವಿಷ್ಯದ ನಾಯಕನೆಂದು ನೆಹರೂ ಗುರುತಿಸಿ ವಿದೇಶಗಳಿಗೆ ಭಾರತದ ನಿಯೋಗದ ಸದಸ್ಯರಾಗಿ ಕಳುಹಿಸಿದ್ದರು’ ಎಂದು ಸ್ಮರಿಸಿದರು.  ‘ತುರ್ತುಪರಿಸ್ಥಿತಿ ಕಾರಣ ಇಂದಿರಾ ಗಾಂಧಿ ಅವರನ್ನು ಕ್ಷಮಿಸಲಾಗದು. ನರಸಿಂಹರಾವ್ ಅವರು ಅರ್ಧ ಸಿಂಹ ಅರ್ಧ ಮನುಷ್ಯ. ಆರ್ಥಿಕ ನೀತಿಯಲ್ಲಿ ಸಿಂಹವಾದರೆ ಈಗ ದೇಶ ಆಳುತ್ತಿರುವವರು ಬರುವುದಕ್ಕೆ ಬಾಬ್ರಿ ಮಸೀದಿ ಧ್ವಂಸ ಮಾಡಲು ಅವಕಾಶ ನೀಡಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.