ನಂಜನಗೂಡು: ತಾಲ್ಲೂಕಿನ ಮಲ್ಲನಮೂಲೆ ಮಠದ ಬಳಿ ಕಪಿಲಾ ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಮ್ಮಗಳು ಮಿಂಚು (8) ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮೈಸೂರಿನ ಜೆಎಸ್ಎಸ್ ಬಡಾವಣೆಯ ನಿವಾಸಿಗಳಾದ ಅಕ್ಕಮ್ಮ (60), ರಶ್ಮಿ (35) ಮೃತಪಟ್ಟವರು.
ಘಟನೆ ವಿವರ: ರಶ್ಮಿ ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿಯ ಡಿಸಿಸಿ ಬ್ಯಾಂಕ್ ಉದ್ಯೋಗಿ. ಸಾಲ ಮಾಡಿಕೊಂಡು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸೋಮವಾರ ಬೆಳಿಗ್ಗೆ ನಂಜನಗೂಡಿಗೆ ಹೋಗಿದ್ದಾರೆ. ಅಲ್ಲಿ ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿದ ನಂತರ, ಮಲ್ಲನಮೂಲೆ ಬಳಿ ತಾಯಿ ಅಕ್ಕಮ್ಮ, ಮಗಳು ರಶ್ಮಿ ಹಾಗೂ ಮೊಮ್ಮಗಳು ಮಿಂಚು ಕೈಯಿಗೆ ಪರಸ್ಪರ ಬಟ್ಟೆ ಕಟ್ಟಿಕೊಂಡು ಕಪಿಲಾ ನದಿಗೆ ಹಾರಿದರು. ದಡದಲ್ಲಿದ್ದ ದನಗಾಹಿ ಬಸವನಪುರದ ಮಹದೇವ ಎಂಬಾತ ನದಿಗೆ ಹಾರಿದ ಮೂವರನ್ನೂ ದಡಕ್ಕೆ ಎಳೆದು ತಂದಿದ್ದಾರೆ, ಅಷ್ಟರಲ್ಲಾಗಲೇ ರಶ್ಮಿ ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ಅಕ್ಕಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸತ್ತಿದ್ದಾರೆ. ಮೊಮ್ಮಗಳು ಮಿಂಚು ಬದುಕುಳಿದಿದ್ದಾಳೆ.
ಮೃತರ ಸಂಬಂಧಿ ಜೀವನ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಸ್.ಐ. ಸತೀಶ್ ಸ್ಥಳಕ್ಕೆ ಭೇಟಿ ಮಹಜರು ನಡೆಸಿದರು. ಮೃತದೇಹಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.