ADVERTISEMENT

ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕಿಡಿಗೇಡಿಗಳು ಸಗಣಿ ಹಾಕಿ ಅವಮಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:16 IST
Last Updated 17 ಅಕ್ಟೋಬರ್ 2019, 14:16 IST
ಸಾಗರೆ ಗ್ರಾಮದ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕಿಡಿಗೇಡಿಗಳು ಸಗಣಿ ಎರಚಿರುವುದು
ಸಾಗರೆ ಗ್ರಾಮದ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕಿಡಿಗೇಡಿಗಳು ಸಗಣಿ ಎರಚಿರುವುದು   

ಸರಗೂರು: ತಾಲೂಕಿನ ಸಾಗರೆ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕಿಡಿಗೇಡಿಗಳು ಸಗಣಿ ಹಾಕಿ ಅವಮಾನ ಮಾಡಿರುವುದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರ ನೇತೃತ್ವದಲ್ಲಿ ಪ್ರತಿಮೆ ಬಳಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಯಿತು.

ಬುಧವಾರ ತಡರಾತ್ರಿ ಗ್ರಾಮದಲ್ಲಿನ ವಾಲ್ಮೀಕಿ ಪ್ರತಿಮೆಗೆ ಸಗಣಿಯಿಂದ ಬಳಿದು ವಿರೂಪಗೊಳಿಸಲಾಗಿದ್ದು, ಇದರಿಂದ ಜನಾಂಗದವರು ಅವಮಾನಿತರಾಗಿ ಪದೇ ಪದೇ ಪ್ರತಿಮೆಗೆ ಅವಮಾನಿಸುತ್ತಿರುವುದು ಹೇಯ ಕೃತ್ಯ. ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ತಪ್ಪಿದಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೈಸೂರು ಜಿಲ್ಲಾ ಅಡಿಷನಲ್ ಎಸ್ಪಿ ಸ್ನೇಹಾ, ಡಿವೈಎಸ್ಪಿ ಸುಂದರರಾಜ್ ಅವರು ಪ್ರತಿಭಟನಾಕಾರರನ್ನು ಕುರಿತು ಮಾತನಾಡಿ, ಕಳೆದ ತಿಂಗಳಲ್ಲಿ ಸಾಗರೆ ಗ್ರಾಮದಲ್ಲಿ ವಾಲ್ಮೀಕಿ ಪ್ರತಿಮೆಗೆ ಸಗಣಿ ಹಾಕಿ ಅವಮಾನ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೆ ಮತ್ತೆ ಕಿಡಿಗೇಡಿಗಳು ಪ್ರತಿಮೆಗೆ ಸಗಣಿ ಹಾಕಿ ಅವಮಾನ ಮಾಡಿದ ಕಿಡಿಗೇಡಿಗಳು ಎಷ್ಟೆ ಪ್ರಭಾವಿಗಳಾಗಿದ್ದರೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ADVERTISEMENT

ಇದೇ ಸಂದರ್ಭ ಕಿಡಿಗೇಡಿಗಳನ್ನು ಬಂಧಿಸಲು ಶ್ವಾನದಳದ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಲಾಯಿತು. ಆದರೂ ಕಿಡಿಗೇಡಿಗಳು ಪತ್ತೆಯಾಗಲಿಲ್ಲ. ನಂತರ ಪೊಲೀಸರು ಪ್ರತಿಮೆಯ ಬಳಿ ನಾಲ್ಕು ಕಡೆಗಳಿಂದ ಸಿಸಿ ಕ್ಯಾಮರಾವನ್ನು ಅಳವಡಿಸಲಾಯಿತು. ಸರಗೂರು ಉಪ ತಹಸೀಲ್ದಾರ್ ಸುನೀಲ್, ಎಚ್.ಡಿ.ಕೋಟೆ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಸರಗೂರು ಪಿಎಸ್ಐ ಪುಟ್ಟರಾಜು, ಕೆಂಡಗಣ್ಣಸ್ವಾಮಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.