ಮೈಸೂರು: ನಗರದ ಬನ್ನಿಮಂಟಪದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ವಿಶ್ವವಿಖ್ಯಾತ ‘ಅಂಬಾವಿಲಾಸ ಅರಮನೆ’ಯ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ.
ಕಟ್ಟಡದ ಮುಂಭಾಗದ ಹೊರಮೇಲ್ಮೈ ಅರಮನೆಯಂತೆ ಕಾಣುವಂತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಎಲ್ಲವೂ ಅಂದುಕೊಂಂತೆ ನಡೆದಲ್ಲಿ ಎರಡು ವರ್ಷಗಳಲ್ಲಿ ನಗರದಲ್ಲಿ ಮತ್ತೊಂದು ಬಸ್ ನಿಲ್ದಾಣ ತಲೆ ಎತ್ತಲಿದ್ದು, ಅಂಬಾವಿಲಾಸ ಅರಮನೆಯ ಪ್ರತಿರೂಪದಂತೆ ಮೈದಳೆಯಲಿದೆ.
ಅಲ್ಲಿರುವ ಕೆಎಸ್ಆರ್ಟಿಸಿಗೆ ಸೇರಿದ 14 ಎಕರೆ ಜಾಗದಲ್ಲಿ ನಿಲ್ದಾಣ ನಿರ್ಮಿಸಲಾಗುತ್ತಿದೆ. ವಿಭಾಗೀಯ ಕಚೇರಿ ಬಸ್ ಘಟಕಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಅತ್ಯಾಧುನಿಕ ಕೇಂದ್ರೀಯ ಬಸ್ ನಿಲ್ದಾಣ ಇದಾಗಲಿದೆ.
ಯೋಜನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025–26ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದರು. ಬಳಿಕ, ಜೂನ್ 2ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.
ಏಕೆ ನಿರ್ಮಾಣ?:
ನಗರದಲ್ಲಿರುವ ಈಗಿನ ಗ್ರಾಮಾಂತರ ಬಸ್ನಿಲ್ದಾಣ (ಸಬ್ಅರ್ಬನ್) ಈಗಿನ ಬಹಳಷ್ಟು ಕಿರಿದಾಗಿದ್ದು, ಮೈಸೂರಿನ ಜನದಟ್ಟಣೆಗೆ ತಕ್ಕಂತೆ ಸಾಲದಾಗುತ್ತಿಲ್ಲ. ಬೆಂಗಳೂರು–ನೀಲಗಿರಿ ರಸ್ತೆಯಲ್ಲಿರುವ ಇಲ್ಲಿಗೆ ಪ್ರತಿ ದಿನ ಬಸ್ ನಿಲ್ದಾಣಕ್ಕೆ ವಿವಿಧ ಡಿಪೊ ಹಾಗೂ ರಾಜ್ಯಗಳಿಂದ 3,500ಕ್ಕೂ ಜಾಸ್ತಿ ಬಸ್ಗಳು ಬಂದು–ಹೋಗುತ್ತವೆ. ಸಾವಿರಾರು ಮಂದಿ ಬಳಕೆದಾರರು ಇದ್ದಾರೆ. ರಜಾ ದಿನಗಳು ಹಾಗೂ ವಾರಾಂತ್ಯದ ಸಂದರ್ಭದಲ್ಲಂತೂ ಹೆಚ್ಚಿನ ಸಂದಣಿ ಕಂಡುಬರುತ್ತಿದೆ. ಇವೆಲ್ಲವನ್ನೂ ನಿರ್ವಹಿಸಲು ಹಾಗೂ ಮುಂದಿನ ವರ್ಷಗಳಲ್ಲಿ ಹೆಚ್ಚಬಹುದಾದ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ನಿರ್ಮಿಸಬೇಕಾದ ಅಗತ್ಯವಿದೆ, ವಿಶಾಲವಾದ ಜಾಗವೂ ಅಗತ್ಯವಾಗಿದೆ ಎಂಬ ನಿರ್ಧಾರಕ್ಕೆ ಸಾರಿಗೆ ಇಲಾಖೆಯು ಬಂದಿದೆ. ಅದರಂತೆ, ಯೋಜನೆಯನ್ನು ರೂಪಿಸಲಾಗಿದ್ದು ಅದಕ್ಕೆ ಸರ್ಕಾರದಿಂದ ಅನುಮೋದನೆಯೂ ದೊರೆತಿದೆ.
ಶೀಘ್ರದಲ್ಲೇ ಚಾಲನೆ:
ಈಗಿರುವ ಬಸ್ನಿಲ್ದಾಣದ ಸುತ್ತಮುತ್ತ ಹೋಟೆಲ್ ಮೊದಲಾದ ಉದ್ಯಮ ಹೊಂದಿರುವವರು, ಹೋಟೆಲ್ ಮಾಲೀಕರ ಸಂಘದವರು ಹಾಗೂ ಮೈಸೂರು ಗ್ರಾಹಕರ ಪರಿಷತ್ತು ಮೊದಲಾದವರ ವಿರೋಧದ ನಡುವೆಯೂ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸರ್ಕಾರದ ಎರಡು ವರ್ಷಗಳ ‘ಸಾಧನಾ ಸಮಾವೇಶ’ದಲ್ಲಿ ಚಾಲನೆ ನೀಡಿದ್ದಾರೆ. ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲು ಸಾರಿಗೆ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈಗಿರುವ ನಿಲ್ದಾಣ ಏನು ಮಾಡಲಾಗುತ್ತದೆ?:
‘ಹೊಸ ನಿಲ್ದಾಣ ನಿರ್ಮಾಣಗೊಂಡ ನಂತರವೂ ಬೆಂಗಳೂರು–ನೀಲಗಿರಿ ರಸ್ತೆಯಲ್ಲಿರುವ ಈಗಿನ ನಿಲ್ದಾಣವನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು. ಅಲ್ಲಿಗೆ ಮೈಸೂರು ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಿಂದ ಮಂಡ್ಯ ಚಾಮರಾಜನಗರ ಮೊದಲಾದ ಕಡೆಗಳಿಂದ ತಾಲ್ಲೂಕು ಕೇಂದ್ರಗಳಿಂದ ಬರುವಂತಹ ಹಾಗೂ ಹೋಗುವಂತಹ ಬಸ್ಗಳ ಕಾರ್ಯಾಚರಣೆ ನಡೆಸಲಾಗುವುದು. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ಹೊರರಾಜ್ಯಗಳಿಗೆ ತೆರಳುವ ಬಸ್ಗಳು (ಲಾಂಗ್ ರೂಟ್) ಬನ್ನಿಮಂಟಪದ ಬಸ್ ನಿಲ್ದಾಣದಿಂದ ಹೊರಡಲಿವೆ; ಅಲ್ಲಿಂದ ಆಗಮಿಸಲಿವೆ’ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದರು.
‘ದಟ್ಟಣೆ ನಿರ್ವಹಣೆಗೆಂದು’:
‘ಅಂಬಾವಿಲಾಸ ಅರಮನೆಯ ಮಾದರಿಯ ವಿನ್ಯಾಸ ಬಹುತೇಕ ಅಂತಿಮಗೊಂಡಿದೆ. ಟೆಂಡರ್ ಆಗಿದ್ದು ಎರಡು ವರ್ಷಗಳಲ್ಲಿ ಪೂರೈಸುವ ಗುರಿ ಹೊಂದಲಾಗಿದೆ. ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿರುವ ನಿಲ್ದಾಣದ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ದಟ್ಟಣೆ ನಿರ್ವಹಣೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಹೊಸದಾದ ನಿಲ್ದಾಣ ನಿರ್ಮಿಸಲಾಗುತ್ತಿದೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಾಣಿಜ್ಯ ಮಳಿಗೆಗಳನ್ನೂ ಹೊಂದಿರಲಿದೆ. 2 ಲಕ್ಷ ಚ.ಅಡಿಯಷ್ಟು ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಯೋಜಿಸಲಾಗಿದೆ. ಸೆಲ್ಲಾರ್ನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಮೊದಲ ಮಹಡಿಯಲ್ಲಿ ಬಸ್ ನಿಲ್ದಾಣ ಬರಲಿದೆ. ಏಕಕಾಲದಲ್ಲಿ 75 ಬಸ್ಗಳ ಸಂಚಾರಕ್ಕೆ ಹಾಗೂ 30 ಬಸ್ಗಳ ನಿಲುಗಡೆ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.