ADVERTISEMENT

ಮೈಸೂರು ಮೇಯರ್ ಸದಸ್ಯತ್ವ ಅನರ್ಹ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 1:38 IST
Last Updated 26 ಫೆಬ್ರುವರಿ 2021, 1:38 IST
ಮೈಸೂರು ಮೇಯರ್‌ ರುಕ್ಮಿಣಿ ಮಾದೇಗೌಡ (ಪ್ರಜಾವಾಣಿ ಚಿತ್ರ)
ಮೈಸೂರು ಮೇಯರ್‌ ರುಕ್ಮಿಣಿ ಮಾದೇಗೌಡ (ಪ್ರಜಾವಾಣಿ ಚಿತ್ರ)   

ಬೆಂಗಳೂರು: ಮೈಸೂರಿನ ನೂತನ ಮೇಯರ್ ಎಸ್.ರುಕ್ಮಿಣಿ ಮಾದೇಗೌಡ ಅವರ ಅನರ್ಹ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಣೆ ಮಾಡಿದೆ.

‘ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ. ಹೀಗಾಗಿ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಪರಾಜಿತ ಅಭ್ಯರ್ಥಿ ರಜಿನಿ ಅಣ್ಣಯ್ಯ ದೂರು ನೀಡಿದ್ದರು. ಅದನ್ನು ಪುರಸ್ಕರಿಸಿದ್ದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರುಕ್ಮಿಣಿ ಅವರ ಸದಸ್ಯತ್ವ ರದ್ದುಪಡಿಸಿ 2020ರ ಡಿ.14ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ರುಕ್ಮಿಣಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಜ.7ರಂದು ತಡೆಯಾಜ್ಞೆ ನೀಡಿತ್ತು. ಚುನಾವಣಾಧಿಕಾರಿ ಮತ್ತು ಗೀತಾ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.

ADVERTISEMENT

ಈ ನೋಟಿಸ್ ತಲುಪದ ಕಾರಣ ಮತ್ತೆ ತಲುಪಿಸುವಂತೆ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿದ ಪೀಠ, ವಿಚಾರಣೆ ಮುಂದೂಡಿತು. ಮುಂದಿನ ವಿಚಾರಣೆ ತನಕ ತಡೆಯಾಜ್ಞೆ ಆದೇಶ ವಿಸ್ತರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.