ADVERTISEMENT

ಕೋಟಿ ವೃಕ್ಷ ಪ್ರತಿಷ್ಠಾನ: 20 ಸಾವಿರ ಸಸಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 16:37 IST
Last Updated 11 ಜೂನ್ 2020, 16:37 IST

ಮೈಸೂರು: ‘ನೆಡಲು ಯೋಗ್ಯವಾದ ಇಪ್ಪತ್ತು ಸಾವಿರ ಸಸಿಗಳಿದ್ದು, ನೆಟ್ಟು ಪೋಷಿಸಲು ಇಚ್ಚಿಸುವವರಿಗೆ ಉಚಿತವಾಗಿ ವಿತರಿಸಲಾಗುವುದು’ ಎಂದು ಕೋಟಿ ವೃಕ್ಷ ಪ್ರತಿಷ್ಠಾನದ ಶ್ರೀಕಾಂತ್ ಭಟ್ ತಿಳಿಸಿದರು.

‘ಮೂರರಿಂದ ಐದು ಅಡಿ ಎತ್ತರದ ಅರಳಿ, ಬೇವು, ಮಾವು, ಹಲಸು, ಕಾಡು ಬಾದಾಮಿ, ನೇರಳೆ, ಬಿಲ್ವ, ಶಮಿ, ಹೇರಳೆ, ಅಳಲೆ, ಮಹಾಗನಿ, ಹೊಂಗೆ, ಹೊನ್ನೆ, ತಪಸಿ, ಬೇಲ, ಕರಿಬೇವು, ಅರ್ಜುನ, ಸೀತಾಫಲ ಸೇರಿದಂತೆ ಇತರ ಸಸಿಗಳು ಲಭ್ಯವಿವೆ’ ಎಂದು ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಸಿ ಬೇಕಿದ್ದವರು ಪ್ರತಿಷ್ಠಾನಕ್ಕೆ ಅರ್ಜಿ ನೀಡಬೇಕು. ಸಸಿ ತೆಗೆದುಕೊಳ್ಳುವ ಮೊದಲು ಗುಂಡಿ ತೆಗೆದಿರಬೇಕು, ಟ್ರೀಗಾರ್ಡ್ ಅನ್ನು ಮೊದಲೇ ತೆಗೆದಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಗಿಡ ಕಾಪಾಡಲು ನೀರಿನ ವ್ಯವಸ್ಥೆ ಇರಬೇಕು. ಗಿಡಗಳನ್ನು ನೆಟ್ಟು ನೀರು ಹಾಕಿ, ಬೇಲಿ ರಕ್ಷಣೆ ಮಾಡುತ್ತೇನೆ’ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ತಮ್ಮ ಪ್ರತಿಷ್ಠಾನದ ಷರತ್ತುಗಳನ್ನು ತಿಳಿಸಿದರು.

ADVERTISEMENT

ಆಸಕ್ತ ಪರಿಸರ ಪ್ರೇಮಿಗಳು ವಾಟ್ಸ್‌ಆ್ಯಪ್‌ ನಂಬರ್ 9480505931 ಗೆ ಸಂದೇಶ ಕಳುಹಿಸಿ, ಗಿಡ ತೆಗೆದುಕೊಳ್ಳುವ ದಿನ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು ಎಂದರು.

ಪರಿಸರ ಚಂದ್ರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.