ADVERTISEMENT

ಎನ್‌ಸಿಸಿ ಮೈಸೂರು ಗ್ರೂಪ್‌ ‘ಅತ್ಯುತ್ತಮ’

ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ 80 ಕೆಡೆಟ್‌ಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 9:03 IST
Last Updated 26 ಫೆಬ್ರುವರಿ 2023, 9:03 IST

ಮೈಸೂರು: ‘ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಲ್ಲಿ ಬರುವ 6 ಗುಂಪುಗಳಲ್ಲಿ ಎನ್ಸಿಸಿ ಮೈಸೂರು ಗ್ರೂಪ್‌ ‘ಅತ್ಯುತ್ತಮ ಎನ್‌ಸಿಸಿ ಗ್ರೂಪ್‌’ ಎನಿಸಿದೆ.

‘ಬೆಸ್ಟ್ ಗ್ರೂಪ್‌ ಬ್ಯಾನರ್‌’ ಅನ್ನು ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮೋಡರ್ ಕನ್ವರ್ ಅವರು ಮೈಸೂರು ಎನ್‌ಸಿಸಿ ಗ್ರೂಪ್‌ ಕಮಾಂಡರ್ ಕರ್ನಲ್ ಆರ್.ಆರ್.ಮೆನನ್ ಅವರಿಗೆ ಬೆಂಗಳೂರಿನಲ್ಲಿ ಹಸ್ತಾಂತರಿಸಿದ್ದಾರೆ.

‘ಮೈಸೂರು ಗ್ರೂಪ್ ಅಡಿಯಲ್ಲಿ ಬರುವ ಅನೇಕ ಎನ್‌ಸಿಸಿ ಘಟಕಗಳು ಹಲವು ಪ್ರಶಸ್ತಿಗಳನ್ನು ಪಡೆದಿವೆ. ಪ್ರಮುಖ ಘಟಕಗಳಲ್ಲಿ 14 ಕರ್ನಾಟಕ ಬೆಟಾಲಿಯನ್‌ ಚಾಂಪಿಯನ್‌ ಬೆಟಾಲಿಯನ್ ತನ್ನದಾಗಿಸಿಕೊಂಡಿದ್ದರೆ, 13 ಕರ್ನಾಟಕ ಬೆಟಾಲಿಯನ್‌ ರನ್ನರ್ಸ್‌ ಅಪ್‌ ಬೆಟಾಲಿಯನ್ ಎನಿಸಿದೆ. 3 ಕರ್ನಾಟಕ ನೌಕಾ ಘಟಕವು ಅತ್ಯುತ್ತಮ ನೌಕಾ ಘಟಕ ಎನಿಸಿದೆ. ಮೈನರ್ ಯುನಿಟ್ ವಿಭಾಗದಲ್ಲಿ 1 ಕರ್ನಾಟಕ ಆರ್ಟಿಲರಿ ಬ್ಯಾಟರಿಯು ರನ್ನರ್ಸ್‌ ಅಪ್ ಆಗಿದೆ. 3 ಕರ್ನಾಟಕ ಬಾಲಕಿಯರ ಬೆಟಾಲಿಯನ್‌ ರನ್ಸರ್ಸ್‌ ಅಪ್‌ ಪಡೆದಿದೆ’ ಎಂದು ಮೆನನ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಮೈಸೂರು ಗ್ರೂಪ್‌ ಅತ್ತುತ್ತಮ ಎನ್‌ಸಿಸಿಎಎ ಚಾಪ್ಟರ್‌ ಎನಿಸಿದೆ. ಮೈಸೂರು ಗ್ರೂಪ್‌ನಿಂದ 32 ಕೆಡೆಟ್‌ಗಳು ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವುದು ಪ್ರತಿಷ್ಠೆಯ ವಿಷಯವಾಗಿದೆ. ಈ ಬಾರಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿನ ಕೆಡೆಟ್‌ಗಳು ಆಯ್ಕೆಯಾಗಿರುವುದು ದಾಖಲೆಯೇ ಆಗಿದೆ’ ಎಂದು ತಿಳಿಸಿದರು.

‘ಜೂನಿಯರ್ ಅಂಡರ್ ಆಫೀಸರ್ ಕಲ್ಪನಾ ಕುಟ್ಟಪ್ಪ ಅವರಿಗೆ ರಕ್ಷಣಾ ಮಂತ್ರಿ ಶ್ಲಾಘನೆಯ ಕಾರ್ಡ್‌ ಸಿಕ್ಕಿದೆ. ಸೀನಿಯರ್‌ ಅಂಡರ್ ಆಫೀಸರ್ ಚೈತ್ರಾ ಎಸ್. ಅವರಿಗೆ ರಕ್ಷಣಾ ಕಾರ್ಯದರ್ಶಿ ಶ್ಲಾಘನೆಯ ಕಾರ್ಡ್‌ ದೊರೆತಿದೆ. ನಮ್ಮ ಕೆಡೆಟ್‌ಗಳು ಅನೇಕ ರಾಷ್ಟ್ರೀಯ ಶಿಬಿರಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಗೆದ್ದಿದ್ದಾರೆ. ಅಂತರ ನಿರ್ದೇಶನಾಲಯ ಕ್ರೀಡಾ ಶೂಟಿಂಗ್‌ ಶಿಬಿರದಲ್ಲಿ ಬಾಲಕಿಯರು ಜಯಿಸಿದ್ದಾರೆ. ಅಖಿಲ ಭಾರತ ನೌ ಸೈನಿಕ ಶಿಬಿರದಲ್ಲಿ 3 ಕರ್ನಾಟಕ ನೌಕಾ ಘಟಕದ 6 ಕೆಡೆಟ್‌ಗಳು, ಅಖಿಲ ಭಾರತ ಯಾಚಿಂಗ್‌ ಮತ್ತು ರೆಗೆಟ್ಟಾದಲ್ಲಿ 3 ಕರ್ನಾಟಕ ನೇವಲ್‌ ಘಟಕದಿಂದ ಮೂವರು ಕೆಡೆಟ್‌ಗಳು, ಅಖಿಲ ಭಾರತ ವಾಯು ಸೈನಿಕ ಶಿಬಿರದಲ್ಲಿ 3 ಕೆಡೆಟ್‌ಗಳು, ಅಖಿಲ ಭಾರತ ಥಾಲ್ ಸೈನಿಕ ಶಿಬಿರದಲ್ಲಿ 11 ಕೆಡೆಟ್‌ಗಳು, ಬಾಲಕರ ವಿಭಾಗದಲ್ಲಿ 17 ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ. ಗ್ರೂಪ್‌ನ ಅಧಿಕಾರಿಗಳು, ಸಿಬ್ಬಂದಿ ಮತ್ತು ಕೆಡೆಟ್‌ಗಳ ಪ್ರೇರಣೆ ಹಾಗೂ ಬದ್ಧತೆಯಿಂದ ಇವೆಲ್ಲವೂ ಸಾಧ್ಯವಾಗಿದೆ’ ಎಂದರು.

ಸಾಧಕ 80 ಕೆಡೆಟ್‌ಗಳನ್ನು ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಎನ್‌ಸಿಸಿ ಗ್ರೂ‍‍ಪ್‌ ಕೇಂದ್ರ ಸ್ಥಾನದ ಆವರಣದಲ್ಲಿ ಭಾನುವಾರ ಸನ್ಮಾಸಲಾಯಿತು.

ವಿವಿಧ ವಿಭಾಗಗಳ ಮುಖ್ಯಸ್ಥರಾದ ಕರ್ನಲ್‌ಗಳಾದ ಮನಿಶ್, ಆಶುತೋಷ್ ದೇವರಾಣಿ, ರಾಜೀವ್ ಹಾಗೂ ಏರ್‌ ಕಮೋಡರ್ ಅಭಿನವ್ ಚತುರ್ವೇದಿ, ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಮೋದ್ ಬಿ.ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.