ಸಾವು
ಪ್ರಾತಿನಿಧಿಕ ಚಿತ್ರ
ಮೈಸೂರು: ತಾಲ್ಲೂಕಿನ ಮುರುಡನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ಮೂರು ವರ್ಷದ ಮಗನಿಗೆ ನೇಣು ಬಿಗಿದು ಸಾಯಿಸಿ, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಮಗಳು ಲೋಚನಾ (6)ಳಿಗೂ ನೇಣು ಬಿಗಿಯಲು ಯತ್ನಿಸಿದ್ದು, ತಾಯಿಯಿಂದ ತಪ್ಪಿಸಿಕೊಂಡ ಆಕೆ ಬದುಕುಳಿದಿದ್ದಾಳೆ.
ಗ್ರಾಮದ ನಿವಾಸಿ ಸ್ವಾಮಿ ಅವರ ಪತ್ನಿ ದೀಪಿಕಾ (25) ತನ್ನ ಮಗ ಗಾನ್ವಿಕ್ಗೆ ನೇಣು ಬಿಗಿದು ಕೊಂದು, ತಾನೂ ನೇಣು ಹಾಕಿಕೊಂಡಿದ್ದಾರೆ. ‘ಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತರ ಸಹೋದರ ಮಹದೇವಸ್ವಾಮಿ ಜಯಪುರ ಠಾಣೆಗೆ ಗುರುವಾರ ದೂರು ನೀಡಿದ್ದರು.
‘ನಂಜನಗೂಡು ತಾಲ್ಲೂಕು ಸಿದ್ದಯ್ಯನಹುಂಡಿ ಗ್ರಾಮದ ದೀಪಿಕಾ ಹಾಗೂ ಮುರಡನಹಳ್ಳಿ ನಿವಾಸಿ ಸ್ವಾಮಿ 2019ರಲ್ಲಿ ವಿವಾಹವಾಗಿದ್ದರು. ದಂಪತಿ ಮುರುಡನಹಳ್ಳಿಯಲ್ಲಿಯೇ ವಾಸವಿದ್ದರು. ಆದರೆ, ಕೆಲ ದಿನಗಳಿಂದೀಚಿಗೆ ನಾನು ಹಳ್ಳಿಯಲ್ಲಿ ಇರಲು ಆಗುತ್ತಿಲ್ಲ, ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ. ನಾವು ಅಲ್ಲಿಯೇ ವಾಸವಿರೋಣ ಎಂದು ಪತಿಯನ್ನು ಒತ್ತಾಯಿಸುತ್ತಿದ್ದರು. ಆದರೆ ಹಣಕಾಸಿನ ಮುಗ್ಗಟ್ಟು ಇರುವ ಕಾರಣ ಸ್ವಲ್ಪ ದಿನ ಕಾಯುವಂತೆ ಸ್ವಾಮಿ ಪತ್ನಿಗೆ ಬುದ್ಧಿ ಹೇಳಿದ್ದರು. ದೀಪಿಕಾ ಕುಟುಂಬದವರು ಕೂಡ ಆಕೆಗೆ ಬುದ್ಧಿ ಹೇಳಿದ್ದರು. ಇದರಿಂದ ಬೇಸರಗೊಂಡು ಆಕೆ ಆ. 10 ರಂದು ಮಧ್ಯಾಹ್ನ ಮನೆಯಲ್ಲಿ ಪುತ್ರನಿಗೆ ನೇಣು ಬಿಗಿದು, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆ ಬೆದರಿಕೆ: ಪ್ರಕರಣ ದಾಖಲು
ಮೈಸೂರು: ಮುಚ್ಚಳಿಕೆ ಬರೆಯಲು ಬಂದ ರೌಡಿಶೀಟರ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರನ್ನೇ ಬೆದರಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ವಿಜಯನಗರ ಠಾಣೆಯಲ್ಲಿ ಗೌರಿ, ಗಣೇಶ ಹಬ್ಬ ಹಾಗೂ ದಸರಾ ಅಂಗವಾಗಿ ಮುಚ್ಚಳಿಕೆ ಬರೆಸಲು ಸ್ವಾಮಿಯನ್ನು ಮಂಗಳವಾರ ಕರೆಸಿಕೊಂಡಿದ್ದರು. ಆತ ಠಾಣೆಗೆ ಡಿಸೇಲ್ ಹಿಡಿದುಕೊಂಡು ಬಂದು, ರೌಡಿ ಶೀಟರ್ ಪಟ್ಟಿಯಿಂದ ನನ್ನ ಹೆಸರು ತೆಗೆಯಬೇಕು. ಇಲ್ಲದಿದ್ದರೆ ಡಿಸೇಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ. ನಂತರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.