ADVERTISEMENT

ಒಳಮೀಸಲಾತಿ: ಹೈಕೋರ್ಟ್‌ಗೆ ಅರ್ಜಿ; ಬಲಗೈ ಸಮುದಾಯ ಮುಖಂಡರ ನಿರ್ಣಯ

ದುಂಡುಮೇಜಿನ ಸಭೆ: ಬಲಗೈ ಸಮುದಾಯ ಮುಖಂಡರ ನಿರ್ಣಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:29 IST
Last Updated 8 ಸೆಪ್ಟೆಂಬರ್ 2025, 6:29 IST
ಮೈಸೂರಿನಲ್ಲಿ ಭಾನುವಾರ ‘ಒಳಮೀಸಲಾತಿ ಒಂದು ಕುತಂತ್ರ ಮತ್ತು ಬಲಗೈ ಸಮುದಾಯದ ಸಾಂವಿಧಾನಿಕ ಹಕ್ಕು ಭಾದ್ಯತೆಗಳ ರಕ್ಷಣೆ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಲೇಖಕ ಸೂರ್ಯದೇವ್ ಮಾತನಾಡಿದರು. ದಾಸಯ್ಯ, ಎನ್.ಭಾಸ್ಕರ್, ನವೀನ ಮುನಿಯ, ಹರಕುಮಾರ್, ತಿಮ್ಮಯ್ಯ, ಚಂದ್ರಶೇಖರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಭಾನುವಾರ ‘ಒಳಮೀಸಲಾತಿ ಒಂದು ಕುತಂತ್ರ ಮತ್ತು ಬಲಗೈ ಸಮುದಾಯದ ಸಾಂವಿಧಾನಿಕ ಹಕ್ಕು ಭಾದ್ಯತೆಗಳ ರಕ್ಷಣೆ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಲೇಖಕ ಸೂರ್ಯದೇವ್ ಮಾತನಾಡಿದರು. ದಾಸಯ್ಯ, ಎನ್.ಭಾಸ್ಕರ್, ನವೀನ ಮುನಿಯ, ಹರಕುಮಾರ್, ತಿಮ್ಮಯ್ಯ, ಚಂದ್ರಶೇಖರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಪ್ರಜಾವಾಣಿ ವಾರ್ತೆ

ಮೈಸೂರು: ‘ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ ಸಲ್ಲಿಸಬೇಕು’ ಎಂಬ ನಿರ್ಣಯವನ್ನು ಮುಖಂಡರು ಕೈಗೊಂಡರು. 

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಭಾನುವಾರ ನಡೆದ ದುಂಡುಮೇಜಿನ ಸಭೆಯಲ್ಲಿ, ‘ಒಳಮೀಸಲಾತಿ ಒಂದು ಕುತಂತ್ರ ಮತ್ತು ಬಲಗೈ ಸಮುದಾಯದ ಸಾಂವಿಧಾನಿಕ ಹಕ್ಕು ಭಾದ್ಯತೆಗಳ ರಕ್ಷಣೆ’ ಕುರಿತು ಚರ್ಚಿಸಿದ ನಂತರ ರಾಜ್ಯ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್‌.ಭಾಸ್ಕರ್‌ ಅವರು ಸಭೆಯ 9 ಅಂಶಗಳ ನಿರ್ಣಯವನ್ನು ಮಂಡಿಸಿದರು.

ADVERTISEMENT

‘ಮೀಸಲಿನಲ್ಲಿ ಬಲಗೈ ಸಮುದಾಯವನ್ನು ಪ್ರವರ್ಗ ‘ಬಿ’ಗೆ ಸೇರಿಸಿರುವುದರಿಂದ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅವಕಾಶ ವಂಚಿತವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘2026–27ನೇ ಸಾಲಿನಲ್ಲಿ ನಡೆಯುವ ಜಾತಿಗಣತಿಯಲ್ಲಿ ಬಲಗೈ ಸಮುದಾಯವು ಒಂದೇ ಜಾತಿ ಸೂಚಕ ಪದ ನಮೂದಿಸಬೇಕು. ನ್ಯಾ.ನಾಗಮೋಹನ ದಾಸ್ ವರದಿಯ ಲೋಪದೋಷಗಳ ಸರ್ಕಾರಕ್ಕೆ ಗಮನಕ್ಕೆ ತರಬೇಕು’ ಎಂದರು. 

‘ಹಿಂದುಳಿದ ವರ್ಗದ ಶಾಶ್ವತ ಆಯೋಗ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಲಗೈ ಸಮುದಾಯಗಳ ಸಮೀಕ್ಷೆಯನ್ನೂ ಕೈಗೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ರಾಜ್ಯ ಸಮಿತಿ ರಚಿಸಬೇಕು’ ಎಂದು ಹೇಳಿದರು. 

‘ಬೆಂಗಳೂರು ಹಾಗೂ ಪಾಲಿಕೆಗಳಿರುವ ನಗರ ಪ್ರದೇಶದಲ್ಲಿ ಸಮರ್ಪಕ ಸಮೀಕ್ಷೆ ನಡೆಸಲು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್‌ ಖರ್ಗೆ ಒಳಗೊಂಡ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗಬೇಕು’ ಎಂದು ಒತ್ತಾಯಿಸಿದರು. 

‘ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು 101 ಪರಿಶಿಷ್ಟ ಜಾತಿಯಿಂದ ಸಂವಿಧಾನದ 341 (2) ವಿಧಿ ಅಡಿ ಕೈ ಬಿಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಬೇಕು. 2026ರಲ್ಲಿ ನಡೆಯುವ ಜಾತಿ ಜನಗಣತಿಯಲ್ಲಿ 98 ಜಾತಿಗಳನ್ನು ಪರಿಗಣಿಸುವಂತೆ ಮಾಡಬೇಕು’ ಎಂದರು. 

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಜೈ ಭೀಮ ಸಾಮಾಜಿಕ ಪರಿವರ್ತನಾ ವೇದಿಕೆ ಸಭೆ ಆಯೋಜಿಸಿದ್ದವು. 

ರಾಜ್ಯ ಲೋಕಸೇವಾ ಆಯೋಗದ ಮಾಜಿ ಸದಸ್ಯ ದಾಸಯ್ಯ, ಪ್ರೊ.ಚಂದ್ರಶೇಖರ ಐಜೂರ್‌, ಹರಕುಮಾರ್, ಸಿದ್ಧಸ್ವಾಮಿ, ಮಹೇಶ್‌ ಇರಸವಾಡಿ, ಒಳಮೀಸಲಾತಿ ಜಾಗೃತಿ ವೇದಿಕೆ ಸಂಚಾಲಕ ನವೀನ್‌ ಮುನಿಯ, ನಿವೃತ್ತ ಐಎಎಸ್‌ ಅಧಿಕಾರಿ ಆರ್.ರಾಜು, ‍ಮೈಸೂರು ವಿ.ವಿ ಸಿಂಡಿಕೇಟ್‌ ಸದಸ್ಯ ನಟರಾಜ್ ಶಿವಣ್ಣ, ಮುಖಂಡರಾದ ಹರಿಹರ ಆನಂದಸ್ವಾಮಿ, ಆರ್.ಸಿದ್ಧಪ್ಪ, ಪ್ರದೀಪ್ ಚಂದ್ರ, ಅಶ್ವಿನಿ, ಪಲ್ಲವಿ ಬೇಗಂ, ಪಿ.ಎಸ್‌.ಕೆಂಪರಾಜು, ನೆಲೆ ಹಿನ್ನೆಲೆ ಗೋಪಾಲ್, ಗೋವಿಂದರಾಜು, ವಕೀಲರಾದ ಪುಟ್ಟಸ್ವಾಮಿ, ಉಮೇಶ್‌, ತಿಮ್ಮಯ್ಯ ಪಾಲ್ಗೊಂಡಿದ್ದರು.   

‘ಪಟ್ಟಿಗೆ ಹೊಸ ಜಾತಿ ಸೇರ್ಪಡೆ: ಉಲ್ಲಂಘನೆ’  ಲೇಖಕ ಸೂರ್ಯದೇವ್‌ ಮಾತನಾಡಿ ‘ನಾಗಮೋಹನ್‌ ದಾಸ್‌ ವರದಿಯಲ್ಲಿ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳ ಜೊತೆ ರಾಯಚೂರಿನ ಮಾದಿಗ ದಾಸರಿ ಅನ್ನೂ ಸೇರಿಸಿದ್ದು 102 ಜಾತಿಯಾಗಿದೆ. ಜಾತಿಗಳನ್ನು ಪಟ್ಟಿಗೆ ಸೇರಿಸಲು ಅವರಿಗೆ ಅಧಿಕಾರವೇ ಇಲ್ಲ. ಸಂವಿಧಾನದ 341(2) ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.  ‘ಪರಿಶಿಷ್ಟ ಜಾತಿಗೆ ಕಲ್ಪಿಸಿರುವ ಮೀಸಲಾತಿ ಕಿತ್ತುಕೊಳ್ಳಲು ಆರ್‌ಎಸ್‌ಎಸ್‌ ಒಳಮೀಸಲಾತಿ ಹುನ್ನಾರ ನಡೆಸಿತು. 2015ರಲ್ಲಿ ಮಾದಾರ ಚೆನ್ನಯ್ಯ ಮಠದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ 4 ಜನ ವಾಸ್ತವ್ಯ ಹೂಡಿದ್ದರು. ಇದಾದ ತಿಂಗಳಲ್ಲೇ ಮಾದಿಗ ಹೋರಾಟ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.