ನಂಜನಗೂಡು: ‘ಬಸವಣ್ಣ ತೋರಿದ ಬೆಳಕು ಬದುಕಿಗೆ ದಾರಿದೀಪವಾಗಿದೆ ,ಅವರ ತತ್ವ ಮತ್ತು ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಹುಲಹಳ್ಳಿ ಶಾಂತ ಮಲ್ಲಿಕಾರ್ಜುನ ಕ್ಷೇತ್ರ ವಿರಕ್ತ ಮಠಾಧ್ಯಕ್ಷ ಇಮ್ಮಡಿ ಚೆನ್ನಮಲ್ಲ ದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಮಠದ ಬೀದಿಯಲ್ಲಿ ಶನಿವಾರ ನಡೆದ ಬಸವ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಕಾಯಕ ಸಿದ್ಧಾಂತಕ್ಕೆ ಮಹತ್ವ ನೀಡಿದ ವಿಶ್ವ ಗುರು ಬಸವಣ್ಣನ ತತ್ವ ಆದರ್ಶಗಳು ಚಿಂತನೆಗಳು ಇಂದಿಗೂ ಪ್ರಸ್ತುತ. ಸಮಾನತೆಗಾಗಿ ಬಸವಣ್ಣನವರು ಹೋರಾಟ ನಡೆಸಿ, ಮೌಢ್ಯಗಳ ವಿರುದ್ಧ ಕಾಂತ್ರಿ ನಡೆಸಿದ್ದರು ಎಂದು ಹೇಳಿದರು.
ಬಸವಣ್ಣ, ಶಿವಕುಮಾರ ಸ್ವಾಮೀಜಿ ಹಾಗೂ ಸದಾಶಿವ ಸ್ವಾಮೀಜಿ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಲಂಕರಿಸಿ ರಥವು ಸಾಗುವ ರಸ್ತೆಯುದ್ಧಕ್ಕೂ ತಳಿರು, ತೋರಣ ಹಾಗೂ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾದ್ಯ, ನಂದಿ ಕಂಬ, ವೀರಗಾಸೆ ಕುಣಿತ, ಗಾರುಡಿ ಗೊಂಬೆ, ನಗಾರಿ, ತಮಟೆ, ಕಲಾತಂಡಗಳು , ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.