ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಚಿಂತನ ಮಂಥನಕ್ಕೆ ಸಲಹೆ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಚ್‌.ವಿಶ್ವನಾಥ್ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 2:35 IST
Last Updated 6 ಸೆಪ್ಟೆಂಬರ್ 2020, 2:35 IST
ಹುಣಸೂರಿನಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಮಾತನಾಡಿದರು
ಹುಣಸೂರಿನಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಮಾತನಾಡಿದರು   

ಹುಣಸೂರು: ‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಇಲಾಖೆ ಜಾಗೃತಿಗೊಳಿಸಬೇಕಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಮನವಿ ಮಾಡಿದರು.

ನಗರದ ಶಿಕ್ಷಕರ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ರಾಷ್ಟ್ರೀಯ ಶೈಕ್ಷಣಿಕ ನೀತಿಯನ್ನು ರಾಜ್ಯ ಸರ್ಕಾರ ಸರ್ವಾನುಮತದಿಂದ ಜಾರಿಗೊಳಿಸಲು ಸಜ್ಜಾಗುತ್ತಿದ್ದು, ಈ ಸಂಬಂಧ ಹೊಸ ನೀತಿ ಕುರಿತು ಜಾಗೃತಿ ಹಾಗೂ ಪೋಷಕರೊಂದಿಗೆ ಚಿಂತನ– ಮಂಥನ ನಡೆಸಬೇಕು’ ಎಂದರು.

‘ರಾಷ್ಟ್ರದಲ್ಲಿ 33 ವರ್ಷಗಳ ಬಳಿಕ ಶಿಕ್ಷಣ ನೀತಿ ಕುರಿತು ವಿಸ್ತಾರವಾಗಿ ಪೋಷಕ ಮತ್ತು ಶಿಕ್ಷಕರ ಸಮ್ಮುಖದಲ್ಲಿ ಚರ್ಚೆ ನಡೆಸಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಪ್ರಯತ್ನ ನಡೆಸಿದ್ದರೆ ಮತ್ತಷ್ಟು ಒಳಿತಾಗುತ್ತಿತ್ತು. ಈ ಕೆಲಸ ಮಾಡದ ಕಾರಣ ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಸರ್ಕಾರ ಜಾರಿಗೊಳಿಸುವ ಎಲ್ಲಾ ಕಾನೂನುಗಳನ್ನು ಒಪ್ಪಿಕೊಳ್ಳಬೇಕು ಎಂಬ ಮನಸ್ಥಿತಿ ಸರಿಯಲ್ಲ. ಹೊಸ ನೀತಿಗಳ ಕುರಿತು ವಿಮರ್ಶೆ ನಡೆಸಿ ಸಾಧಕ– ಬಾಧಕ ಸಮುದಾಯಕ್ಕೆ ತಿಳಿಸುವುದು ಸೂಕ್ತ’ ಎಂದು ಅಭಿಪ್ರಾಯಿಸಿದರು.

ADVERTISEMENT

ಶಾಸಕ ಮಂಜುನಾಥ್ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಶಿಕ್ಷಣ ನೀತಿಯನ್ನು ಶಿಕ್ಷಣ ಕ್ಷೇತ್ರ ಮುಕ್ತವಾಗಿ ಸ್ವಾಗತಿಸದಿರುವುದು ಆರಂಭಿಕ ಆಘಾತ’ ಎಂದರು.

‘ಸರ್ಕಾರ ಕಾಯ್ದೆ ರೂಪಿಸುವುದು ಜನಸಾಮಾನ್ಯರ ಒಳಿತಿಗೆ ಇದ್ದರೂ, ಹೊಸ ನೀತಿ ಕುರಿತು ಸಂಬಂಧಿಸಿದ ವಿದ್ವಾಂಸರ ಸಮಿತಿಯೊಂದಿಗೆ ಚರ್ಚಿಸಿ ನ್ಯೂನತೆಯನ್ನು ಸರಿಪಡಿಸಿ ಜಾರಿಗೊಳಿಸಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ್ ಪರಿಣಾಮ 100 ಶಿಕ್ಷಕರೊಳಗೊಂಡಂತೆ ತಾಲ್ಲೂಕು ಆಡಳಿತ ಸರಳ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಜಿ.ಪಂ. ಸದಸ್ಯರಾದ ಧನಲಕ್ಷ್ಮಿ ಸಿ.ಟಿ.ರಾಜಣ್ಣ ಮಾತನಾಡಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಕಟ್ಟನಾಯಕ, ಸುಮಿತ್ರಮ್ಮ, ತಾ.ಪಂ. ಅಧ್ಯಕ್ಷೆ ಪದ್ಮಮ್ಮ, ರವಿಕುಮಾರ್‌, ಪ್ರೇಮಕುಮಾರ್, ಗಣೇಶ್ ಕುಮಾರಸ್ವಾಮಿ, ತಹಶೀಲ್ದಾರ್ ಬಸವರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಬಿಇಒ ನಾಗರಾಜ್ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.