ಮೈಸೂರು: ಇಲ್ಲಿನ ಏಕಲವ್ಯ ನಗರದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
22 ವರ್ಷಗಳ ಹಿಂದೆ ನಗರದ ಹೆಬ್ಬಾಳು ಕರೆಯಂಗಳದಲ್ಲಿ ಗುಡಿಸಲು ನಿರ್ಮಿಸಿಕೊಂಡು ದೊಂಬಿದಾಸ, ಕಿಳ್ಳೆಕ್ಯಾತ, ಹಕ್ಕಿಪಿಕ್ಕಿ, ಬುಡುಬುಡಿಕೆ ಇತರೆ ಪಂಗಡಗಳಿಗೆ ಸೇರಿದ ಸುಮಾರು 400ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ನಂತರ ಇವರನ್ನು ಶ್ಯಾದನಹಳ್ಳಿ ಗ್ರಾಮದ ಸರ್ವೆ ನಂ. 53 ರಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಿ, ಅಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸಲು ಅನುವು ಮಾಡಿಕೊಡಲಾಯಿತು. 12 ವರ್ಷಗಳ ಹಿಂದೆ ಜೆ.ಎನ್.ನರ್ಮ್ ಯೋಜನೆಯ ಅಡಿ ಮನೆ ನಿರ್ಮಿಸಿಕೊಡುವ ಭರವಸೆಯೊಂದಿಗೆ ಏಕಲವ್ಯ ನಗರದಲ್ಲಿ ಅವಕಾಶ ನೀಡಲಾಯಿತು. ಆದರೆ ಈಗ ಅಲ್ಲಿಂದಲೂ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇವರನ್ನು ಒಕ್ಕಲೆಬ್ಬಿಸದೆ ಹಕ್ಕುಪತ್ರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟಗಾರರಾದ ಪ.ಮಲ್ಲೇಶ್ , ಚೋರನಹಳ್ಳಿ ಶಿವಣ್ಣ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.