ADVERTISEMENT

ಶ್ರೀನಿವಾಸ ಪ್ರಸಾದ್‌ ಅವರದ್ದು ಇಬ್ಬಗೆ ನೀತಿ: ಹೋರಾಟಗಾರ ಪ.ಮಲ್ಲೇಶ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 11:59 IST
Last Updated 10 ಜುಲೈ 2021, 11:59 IST
ಮೈಸೂರಿನಲ್ಲಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ಹಾಗೂ ಡಾ.ರಾಜ್‌ ಎಲ್‌.ಐ.ಸಿ ಕುಟುಂಬದ ಸದಸ್ಯರು ಶನಿವಾರ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು
ಮೈಸೂರಿನಲ್ಲಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ಹಾಗೂ ಡಾ.ರಾಜ್‌ ಎಲ್‌.ಐ.ಸಿ ಕುಟುಂಬದ ಸದಸ್ಯರು ಶನಿವಾರ ಎನ್‌ಟಿಎಂ ಸರ್ಕಾರಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು   

ಮೈಸೂರು:ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಒಕ್ಕೂಟದ ಪ್ರತಿಭಟನೆ ಶನಿವಾರವೂ ಮುಂದುವರಿಯಿತು. ‘ಡಾ.ರಾಜ್‌ ಎಲ್‌.ಐ.ಸಿ ಕುಟುಂಬ’ದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಹೋರಾಟಗಾರ ಪ.ಮMymಲ್ಲೇಶ್‌ ಮಾತನಾಡಿ, ‘ಈಗಿನ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆಯನ್ನು ಕೆಡವಿ ವಿವೇಕ ಸ್ಮಾರಕ ನಿರ್ಮಿಸುವುದು ಬೇಡ ಎಂದೇ ಹೇಳಿದ್ದರು. ಆದರೆ, ಈಗ ಅವರು ಬಿಜೆಪಿಯಲ್ಲಿದ್ದು, ವಿವೇಕ ಸ್ಮಾರಕದ ಪರವಾಗಿ ನಿಂತಿದ್ದಾರೆ’ ಎಂದು ದೂರಿದರು.

‘ಸಂಸದರಾದ ಪ್ರತಾಪಸಿಂಹ ಹಾಗೂ ವಿ.ಶ್ರೀನಿವಾಸ ಪ್ರಸಾದ್‌ ಅವರು ಸರ್ಕಾರ ಪರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾಲೆ ಪರ ವಕಾಲತ್ತು ವಹಿಸಿದ್ದ ಶ್ರೀನಿವಾಸ ಪ್ರಸಾದ್‌ ಈಗ ವಿವೇಕ ಸ್ಮಾರಕ ಪರ ಇದ್ದು, ಇಬ್ಬಗೆ ನೀತಿ ಪ್ರದರ್ಶಿಸುತ್ತಿದ್ದಾರೆ. ಇನ್ನು ಪ್ರತಾಪಸಿಂಹ ಎಳೆ ಹುಡುಗ. ಆತನಿಗೆ ಯಾವ ಅನುಭವವೂ ಇಲ್ಲ. ಆರ್‌ಎಸ್‌ಎಸ್‌ ತತ್ವದ ಮೇಲೆ ಹೋಗುತ್ತಿದ್ದಾನೆ’ ಎಂದು ಹೇಳಿದರು.

ADVERTISEMENT

‘ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ವಿರುದ್ಧವಾಗಿ ಕೋರ್ಟ್‌ ಆದೇಶ ನೀಡಿದೆ. ಎನ್‌ಟಿಎಂ ಶಾಲೆ ಪರವಾಗಿಯೇ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದನ್ನು ಕೋರ್ಟ್‌ನ ಗಮನಕ್ಕೆ ತಂದಿಲ್ಲ. ಹೀಗಾಗಿ, ನಮ್ಮ ವಿರುದ್ಧ ಆದೇಶ ಬಂದಿದೆ. ಆದರೂ, ಸರ್ಕಾರ ಶಾಲೆ ಪರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ. ಸ್ಮಾರಕವನ್ನು ಎಲ್ಲಿ ಬೇಕಾದರೂ ಕಟ್ಟಲಿ. ಶಾಲೆಯನ್ನು ಮುಚ್ಚಲು ನಾವು ಬಿಡುವುದಿಲ್ಲ. ಹೋರಾಟವನ್ನು ಮುಂದುವರಿಸುತ್ತೇವೆ’ ಎಂದರು.

‘ಮೈಸೂರಿನಲ್ಲಿ ಸಾಕಷ್ಟು ಮಠಗಳಿವೆ. ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಿ ಸೇವೆ ಒದಗಿಸುತ್ತಿವೆ. ಆದರೆ, ರಾಮಕೃಷ್ಣ ಆಶ್ರಮವು ಒಂದೆರಡು ಶಾಲೆ ನಿರ್ಮಿಸಿರುವುದು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ. ಒಳ್ಳೆಯ ಕೆಲಸವನ್ನೂ ಮಾಡಿಲ್ಲ’ ಎಂದು ದೂರಿದರು.

‘ಡಾ.ರಾಜ್‌ ಎಲ್‌.ಐ.ಸಿ ಕುಟುಂಬ’ದ ಸಂಚಾಲಕ ಎಸ್‌.ಸಿದ್ದಪ್ಪ ಮಾತನಾಡಿ, ‘ಐತಿಹಾಸಿಕ ಹಿನ್ನೆಲೆಯುಳ್ಳ ಈ ಶಾಲೆಯನ್ನು ಮುಚ್ಚಬಾರದು. ಈ ಶಾಲೆಯಲ್ಲಿ 74 ಮಕ್ಕಳು ಓದುತ್ತಿದ್ದಾರೆ. ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರ ಸ.ರ.ಸುದರ್ಶನ್‌, ಪ್ರೊ.ಕೆ.ಎಸ್‌.ಭಗವಾನ್‌, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.