ADVERTISEMENT

‘ಶುಶ್ರೂಷಕರ ಸ್ಥಾನ ತಂತ್ರಜ್ಞಾನ ತುಂಬದು’

ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು: ಡಾ.ಜಯಶೀಲನ್‌ ಮಾಣಿಕ್ಕಮ್‌ ದೇವದಾಸನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 9:41 IST
Last Updated 11 ಅಕ್ಟೋಬರ್ 2022, 9:41 IST
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಆಯೋಜಿಸಿದ್ದ ‘ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ’ ವಿಚಾರ ಸಂಕಿರಣವನ್ನು ಡಾ.ಜಯಶೀಲನ್‌ ಮಾಣಿಕ್ಕಮ್‌ ದೇವದಾಸನ್‌ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಕೆ.ಅಶ್ವಥಿದೇವಿ, ಜೆಎಸ್‌ಎಸ್‌ ವಿದ್ಯಾಪೀಠದ ಉಪನಿರ್ದೇಶಕ ಡಾ.ಶ್ಯಾಮ ಪ್ರಸಾದ್‌ ಶೆಟ್ಟಿ, ಪ್ರೊ.ಎಲಿಜಬೆತ್‌ ವರ್ಕೀ ಇದ್ದರು -ಪ್ರಜಾವಾಣಿ ಚಿತ್ರ
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಆಯೋಜಿಸಿದ್ದ ‘ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ’ ವಿಚಾರ ಸಂಕಿರಣವನ್ನು ಡಾ.ಜಯಶೀಲನ್‌ ಮಾಣಿಕ್ಕಮ್‌ ದೇವದಾಸನ್‌ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಕೆ.ಅಶ್ವಥಿದೇವಿ, ಜೆಎಸ್‌ಎಸ್‌ ವಿದ್ಯಾಪೀಠದ ಉಪನಿರ್ದೇಶಕ ಡಾ.ಶ್ಯಾಮ ಪ್ರಸಾದ್‌ ಶೆಟ್ಟಿ, ಪ್ರೊ.ಎಲಿಜಬೆತ್‌ ವರ್ಕೀ ಇದ್ದರು -ಪ್ರಜಾವಾಣಿ ಚಿತ್ರ   

ಮೈಸೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಪಾರಮ್ಯ ಸಾಧಿಸಿದ್ದರೂ, ರೋಗಿಯ ಆರೈಕೆಗೆ ಶುಶ್ರೂಷಕರು ಬೇಕೇ ಬೇಕು’ ಎಂದು ತಮಿಳುನಾಡಿನ ಅಣ್ಣೈ ಜೆಕೆಕೆ ಸಂಪೂರಾಣಿ ಅಮ್ಮಳ್‌ ನರ್ಸಿಂಗ್ ಕಾಲೇಜ್ ಮುಖ್ಯಸ್ಥಡಾ.ಜಯಶೀಲನ್‌ ಮಾಣಿಕ್ಕಮ್‌ ದೇವದಾಸನ್‌ ಅಭಿಪ್ರಾಯಪಟ್ಟರು.

ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಆಯೋಜಿಸಿದ್ದ ‘ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರೋಗಿಯ ಆರೈಕೆ, ಶುಶ್ರೂಷಕರ ಕಾಳಜಿ ಬಗ್ಗೆ ಫ್ಲಾರೆನ್ಸ್ ನೈಟಿಂಗೇಲ್‌ ಹೇಳಿದ ಪಾಠಗಳು ಅನುಕರಣೀಯ. ಕಾಯಿಲೆ ಗುಣವಾಗಬೇಕಾದರೆ ಸ್ವಚ್ಛತೆ ಎಷ್ಟು ಮುಖ್ಯ ಎಂಬುವ ಪ್ರಥಮ ಪಾಠಗಳು ಕೋವಿಡ್‌ ಸಂದರ್ಭದಲ್ಲೂ ಪದೇ ಪದೇ ಕೈತೊಳೆದುಕೊಳ್ಳುವಾಗ ಎಲ್ಲರಿಗೂ ನೆನಪಾಗಿದೆ. ಶುಶ್ರೂಷಕರು ಸ್ವಚ್ಛತೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮೆಡಿಕಲ್‌ ಎಂಜಿನಿಯರಿಂಗ್‌ ಕ್ಷೇತ್ರ ಬೆಳೆದಿದ್ದರೂ ಚಿಕಿತ್ಸಾ ವಿಧಾನದ ಬಗ್ಗೆ ಎಂಜಿನಿಯರ್‌ಗಳು ಏನೂ ಹೇಳಲಾಗುವುದಿಲ್ಲ. ವೈದ್ಯರು– ಶುಶ್ರೂಷಕರೇ ಇಲ್ಲವಾಗುತ್ತಾರೆ; ರೋಬಾಟ್‌ಗಳೇ ಚಿಕಿತ್ಸೆ ನೀಡುತ್ತವೆಂಬ ಕಲ್ಪನೆಗಳೂ40 ವರ್ಷದ ಹಿಂದೆ ಬೆಳೆದಿದ್ದವು. ಆದರೆ, ವೈದ್ಯರು– ಶುಶ್ರೂಷಕರ ಕಾರ್ಯವನ್ನು ಯಾವುದೇ ತಂತ್ರಜ್ಞಾನವನ್ನು ವಶಕ್ಕೆ ಪಡೆದಿಲ್ಲ. ಕೃತಕ ಬುದ್ದಿಮತ್ತೆ, ಬಾಟ್‌ ತಂತ್ರಜ್ಞಾನಗಳು ಸಹ ಸೇವೆಯನ್ನು ಬದಲಿಸಲು ಆಗದು’ ಎಂದರು.

‘ಶುಶ್ರೂಷಕರ ಸ್ಪರ್ಶದಿಂದ ಸಿಗುವ ಆರೈಕೆ ಅನುಭವವನ್ನು ಯಾವುದೇ ತಂತ್ರಜ್ಞಾನ ನೀಡಲು ಆಗುವುದಿಲ್ಲ. ಕೋವಿಡ್‌ಗೂ ಮೊದಲುನರ್ಸಿಂಗ್‌ ಶಿಕ್ಷಣದಿಂದ‍ಹಲವರು ವಿಮುಖರಾಗಿದ್ದರು. ಆದರೆ, ಶುಶ್ರೂಷಕರ ಬೆಲೆ ಎಲ್ಲರಿಗೂ ತಿಳಿಯಿತು. ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಿವೆ’ ಎಂದು ತಿಳಿಸಿದರು.

ಕೋಯಿಕೋಡ್‌ನ ಬೇಬಿ ಮೆಮೊರಿಯಲ್‌ ಆಸ್ಪತ್ರೆಯ ನರ್ಸಿಂಗ್‌ ವಿಭಾಗದ ಅಧಿಕಾರಿ ಪ್ರೊ.ಎಲಿಜಬೆತ್ ವಾರ್ಕಿ ಮಾತನಾಡಿ, ‘ಪದವಿ ಮುಗಿದ ನಂತರ ಉದ್ಯೋಗ ಅರಸಿ ಬೇರೋಲ್ಲೋ ಹೋಗುವುದಕ್ಕಿಂತ ನಿಮ್ಮ ಊರಿನ ರೋಗಿಗಳಿಗೆ ಆರೈಕೆ ಮಾಡಬೇಕು. ನಾವು ಬದುಕುವ ಪರಿಸರವನ್ನು ಆರೋಗ್ಯಪೂರ್ಣವಾಗಿಸುವುದು ಎಲ್ಲರ ಜವಾಬ್ದಾರಿ’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಕೆ.ಅಶ್ವಥಿದೇವಿ, ಜೆಎಸ್‌ಎಸ್‌ ವಿದ್ಯಾಪೀಠದ ಉಪನಿರ್ದೇಶಕ ಡಾ.ಶ್ಯಾಮ ಪ್ರಸಾದ್‌ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.