ADVERTISEMENT

‘ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ: ಜಾಗ ಅಂತಿಮವಾಗಿಲ್ಲ’: ಪ್ರೊ.ನೀಲಗಿರಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 7:03 IST
Last Updated 25 ಜನವರಿ 2023, 7:03 IST
ಪ್ರೊ.ನೀಲಗಿರಿ ತಳವಾರ
ಪ್ರೊ.ನೀಲಗಿರಿ ತಳವಾರ   

ಮೈಸೂರು: ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಜಾಗ ಹೊಂದುವುದಕ್ಕೆ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ. ಈವರೆಗೆ ಯಾವುದೂ ಅಂತಿಮವಾಗಿಲ್ಲ’ ಎಂದು ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಮಾನಸ ಗಂಗೋತ್ರಿಯ ಜಯಲಕ್ಷ್ಮಿವಿಲಾಸ ಅರಮನೆಯನ್ನು ಕೇಂದ್ರಕ್ಕೆ ನೀಡುವ ಕುರಿತ ಪ್ರಕ್ರಿಯೆಗಳು ಅಂತಿಮಗೊಂಡಿಲ್ಲ. ಹಳೆಯ ತಹಶೀಲ್ದಾರ್‌ ಕಚೇರಿ ಬಳಿಯ ಜಾಗವನ್ನೂ ನೋಡಲಾಗಿದೆ. ಬಸವ ಅಧ್ಯಯನ ಕೇಂದ್ರದ ಸಮೀಪ 4 ಎಕರೆ ಜಾಗವನ್ನೂ ‍ಪರಿಶೀಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಯಲಕ್ಷ್ಮಿವಿಲಾಸ ಅರಮನೆಯನ್ನು ನೀಡುವುದಕ್ಕೆ ನಮ್ಮ ವಿರೋಧವಿದೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸುಮಾರು 25 ಎಕರೆ ಜಾಗ ಬೇಕಾಗುತ್ತದೆ. ಅಲ್ಲಿ ಶಿಲಾಶಾಸನಗಳ ವಸ್ತುಸಂಗ್ರಹಾಲಯ, ತಾಳೆಗರಿಗಳ ಮ್ಯೂಸಿಯಂ ಸ್ಥಾಪಿಸಬೇಕಾಗುತ್ತದೆ. ತಮಿಳುನಾಡಿನಲ್ಲಿ ಬಹಳ ಕೆಲಸಗಳಾಗಿವೆ. ಇಲ್ಲಿಯೂ ಪ್ರಶಸ್ತವಾದ ಸ್ಥಳವನ್ನು ಒದಗಿಸಬೇಕು’ ಎಂದು ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ಹೇಳಿದರು.

ADVERTISEMENT

‘ಶಾಸ್ತ್ರೀಯ ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಕೇಂದ್ರಕ್ಕೆ ಸಿಐಐಎಲ್‌ನಿಂದ ಅಗತ್ಯ ಸಹಕಾರ ಕೊಡಲಾಗುತ್ತಿದೆ’ ಎಂದು ಸಿಐಐಎಲ್ ನಿರ್ದೇಶಕ ಡಾ.ಶೈಲೇಂದ್ರ ಮೋಹನ್ ಪ್ರತಿಕ್ರಿಯಿಸಿದರು.

ಕೇಂದ್ರದ ಕಾರ್ಯನಿರ್ವಹಣೆಯನ್ನು ಪ್ರಸ್ತುತ ಮಾನಸಗಂಗೋತ್ರಿಯ ಗಾಂಧಿ ಭವನದ ಸಮೀಪದ ಕಟ್ಟಡದಲ್ಲಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.