ADVERTISEMENT

ಕನ್ನಡ ಸಿನಿಮಾಗಳಿಗೆ ಕನ್ನಡಿಗರ ಬೆಂಬಲ ಬೇಕು

ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮನವಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 11:24 IST
Last Updated 29 ನವೆಂಬರ್ 2019, 11:24 IST
ಪಿ.ಶೇಷಾದ್ರಿ
ಪಿ.ಶೇಷಾದ್ರಿ   

ಮೈಸೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗಿದ್ದು, ಕನ್ನಡ ಚಿತ್ರೋದ್ಯಮ ನಲುಗುತ್ತಿದೆ. ಕನ್ನಡಿಗರು ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಿದಲ್ಲಿ ಮಾತ್ರ ನಮ್ಮ ಉಳಿವು ಸಾಧ್ಯ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮನವಿ ಮಾಡಿದರು.

ತಮ್ಮ ನಿರ್ದೇಶನದ ಮೂಕಜ್ಜಿಯ ಕನಸುಗಳು ಚಲನಚಿತ್ರ ಬಿಡುಗಡೆ ಕುರಿತು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಒಟ್ಟು 600 ಏಕತೆರೆ ಚಿತ್ರಮಂದಿರಗಳಿವೆ. 200 ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿವೆ. ಆದರೆ, ಕನ್ನಡ ಚಲನಚಿತ್ರಗಳಿಗೆ ಅರ್ಧದಷ್ಟೂ ಚಿತ್ರಮಂದಿರಗಳು ಸಿಗುತ್ತಿಲ್ಲ. ಇಡೀ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೂಕಜ್ಜಿಯ ಕನಸುಗಳು ಚಲನಚಿತ್ರಕ್ಕೆ ಕೇವಲ 25 ಪರದೆಗಳು ಸಿಕ್ಕಿವೆ’ ಎಂದು ಅವರು ಶುಕ್ರವಾರ ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿ ಕಳೆದ ವಾರ 45 ಸಿನಿಮಾಗಳು ಒಂದೇ ದಿನ ಬಿಡುಗಡೆಗೊಂಡಿವೆ. ಇವುಗಳ ಪೈಕಿ ಕನ್ನಡ ಸಿನಿಮಾಗಳು ಕೇವಲ 9. ತೆಲುಗು 8, ಹಿಂದಿ 4, ಇಂಗ್ಲಿಷ್‌ 4 ಇವೆ. ಮಿಕ್ಕಂತೆ ಬೇರೆ ಬೇರೆ ಭಾಷೆಗಳ ಸಿನಿಮಾಗಳು ಬಿಡುಗಡೆಗೊಂಡಿವೆ. ಹೀಗಿರುವಾಗ ಕನ್ನಡ ಸಿನಿಮಾ ನಿರ್ಮಾಪಕರು, ಕಲಾವಿದರು ಉಳಿದುಕೊಳ್ಳುವುದು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಗೊಂಡ ಕನ್ನಡ ಸಿನಿಮಾಗಳಿಗೆ 3 ದಿನಗಳ ಗುಡುವು ಇರುತ್ತದೆ. ಅಷ್ಟರಲ್ಲಿ ಉತ್ತಮ ಸಂಖ್ಯೆಯ ಪ್ರೇಕ್ಷಕರು ಬರಬೇಕು. ಇಲ್ಲವಾದಲ್ಲಿ ಸಿನಿಮಾಗಳನ್ನು ತೆಗೆಯಲಾಗುತ್ತದೆ. ಕನ್ನಡಿಗರು ನಮ್ಮ ಸಿನಿಮಾಗಳನ್ನು ವೀಕ್ಷಿಸಬೇಕು. ಇಲ್ಲವಾದರೆ ಸದಭಿರುಚಿಯ ಸಿನಿಮಾಗಳ ಸಂಖ್ಯೆ ಕ್ಷೀಣಿಸಿ, ಪರಭಾಷಿಕರ ಆಳ್ವಿಕೆ ಹೆಚ್ಚುವುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ವೈಯಕ್ತಿಕವಾಗಿ ನನಗೆ ಡಬ್ಬಿಂಗ್‌ ಸಂಸ್ಕೃತಿ ಇಷ್ಟವಿಲ್ಲ. ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ಎಷ್ಟು ಯಶಸ್ಸು ಕಂಡಿವೆ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.