
ಮೈಸೂರು: ‘ಮಕ್ಕಳ ಬೆಳವಣಿಗೆಗೆ ಪೋಷಕರ ಶ್ರಮ ಹೆಚ್ಚಿದ್ದು, ಅವರ ತ್ಯಾಗದ ಬಗ್ಗೆ ಅರಿತು ಮಕ್ಕಳು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು’ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
‘ಮಕ್ಕಳಿಂದ ಯಾವುದೇ ನಿರೀಕ್ಷೆ ಮಾಡದೇ ಪೋಷಕರು ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಶೈಕ್ಷಣಿಕ ಸಮಯದಲ್ಲಿ ತಪ್ಪು ದಾರಿ ಹಿಡಿಯದೆ, ಸಮಾಜ ಗುರುತಿಸುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದಂತಾಗುತ್ತದೆ’ ಎಂದು ಹೇಳಿದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪಾಲಿಕೆ ವಲಯ ಅಧಿಕಾರಿ ದಾಸೇಗೌಡ, ಸೋಮಶೇಖರ್, ಸಂಘದ ಅಧ್ಯಕ್ಷ ಎಸ್.ಯಶೋಧರ, ಉಪಾಧ್ಯಕ್ಷೆ ಕೆ.ಸುಮಂಗಳಾ, ಖಜಾಂಚಿ ನಸುಲ್ಲಾ, ನಿರ್ದೇಶಕರಾದ ಬಿ.ಪ್ರಸಾದ್, ಎಸ್.ಮೈತ್ರಿ, ಎನ್.ಮಂಜುನಾಥ್, ಎಚ್.ಎಂ.ಶಿವಪ್ರಸಾದ್, ವಿ.ರಾಜೇಶ್ವರಿ ಬಾಯಿ, ಎಂ.ಬಸವಣ್ಣ, ಡಿ.ಸುರೇಂದ್ರಕುಮಾರ್, ಕೆ.ವಿಶ್ವನಾಥ್, ಬಿ.ರಾಜು, ಕಾರ್ಯದರ್ಶಿ ಎನ್.ಶಿವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.