ಎಚ್.ಡಿ.ಕೋಟೆ: ‘ತಾಲ್ಲೂಕಿನ ದಡದಹಳ್ಳಿ ಹಾಡಿಯಲ್ಲಿ ಆದಿವಾಸಿ ಮಕ್ಕಳು ಹಸಿವಿನಿಂದ ಮೃತಪಟ್ಟ ವಿಷಯ ತಿಳಿದು ಖುದ್ದು ಸ್ಥಳಕ್ಕೆ ಬಂದು ಆಡಳಿತಕ್ಕೆ ಚುರುಕು ಮುಟ್ಟಿಸಿದ ಧೀಮಂತ ವ್ಯಕ್ತಿ ಪಾಸ್ವಾನ್’ ಎಂದು ಚಾ. ನಂಜುಂಡಮೂರ್ತಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ದಲಿತಪರ ಸಂಘಟನೆಗಳು ಮತ್ತು ಆದಿ ಕರ್ನಾಟಕ ಮಹಾಸಭಾ ವತಿಯಿಂದ ಕೇಂದ್ರ ಸಚಿವ ಹಾಗೂ ರಾಷ್ಟ್ರ ರಾಜಕಾರಣಿ ರಾಮ್ ವಿಲಾಸ್ ಪಾಸ್ವಾನ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ಸರಗೂರಿನ ಸಮೀಪದ ಹಳ್ಳಿಯೊಂದರಲ್ಲಿ ನಡೆದ ದಲಿತರ ನರಮೇಧ ಸಂದರ್ಭದಲ್ಲಿಯೂ ಸ್ಥಳಕ್ಕೆ ಬಂದು ದಲಿತರ ಪರವಾಗಿ ಸರ್ಕಾರಕ್ಕೆ ಸಂದೇಶ ನೀಡಿ ದಲಿತರಿಗೆ ನ್ಯಾಯ ಕೊಡಿದಿದ್ದರು, ಸದಾ ದಲಿತರ, ಮಹಿಳೆಯರ ಮತ್ತು ಶೋಷಿತರ ಏಳಿಗೆಗಾಗಿ ಶ್ರಮಿಸಿದ್ದರು’ ಎಂದು ನೆನಪಿಸಿದರು.
‘ಪಾಸ್ವಾನ್ ಅವರ ನಿಧನದಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ, ದಲಿತ ನಾಯಕರನ್ನು ಕಳೆದುಕೊಳ್ಳುವ ಮೂಲಕ ಶೋಷಿತರ ಶಕ್ತಿ ಕ್ಷೀಣಿಸುತ್ತಿದೆ’ ಎಂದರು.
ಬೆಟ್ಟಯ್ಯ ಕೋಟೆ, ಉಮೇಶ್ ಬಿ.ನೂರಲಕುಪ್ಪೆ, ಹೈರಿಗೆ ಶಿವರಾಜ್, ಭೀಮನಳ್ಳಿ ಮಹದೇವು, ಚೌಡಳ್ಳಿ ಜವರಯ್ಯ, ಸವ್ವೆಸಿದ್ದಯ್ಯ, ಶಿವಣ್ಣ ಸೋಗಳ್ಳಿ, ಚಾ.ಶಿವಕುಮಾರ್, ಸಣ್ಣ ಕುಮಾರ್, ಮುತ್ತು ಉಯ್ಯಂಬಳ್ಳಿ, ಮಲಾರ ಮಹದೇವ್, ಶಿವಯ್ಯ, ಪ್ರಕಾಶ್, ಬಸವರಾಜ್, ಪುಟ್ಟಮಾದು, ಸಿದ್ದಯ್ಯ, ಶಿವಣ್ಣ, ಲಕ್ಷ್ಮಣ್, ನಿಂಗರಾಜು ಹೆಗ್ಗನೂರು, ನಟರಾಜ್, ನಾಗರಾಜ್ ಚನ್ನಿಪುರ, ಸೋಮ್ ಸುಂದರ್, ಸಿದ್ದು ಸ್ವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.