ಮೈಸೂರು: ‘ಎಲ್ಲೆಡೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅಲೆ ಬೀಸುತ್ತಿದ್ದು, ನೆಮ್ಮದಿಯ ಬದುಕಿಗಾಗಿ ಪಕ್ಷ ನೀಡಿರುವ ಕೊಡುಗೆಗಳನ್ನು ಜನರು ಸ್ಮರಿಸುತ್ತಿದ್ಧಾರೆ’ ಎಂದು ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಹೇಳಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 49ರ ಬಸವೇಶ್ವರ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ ಅವರ ಪರ ಗುರುವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ, ನಂಜು ಮಳಿಗೆ ವೃತ್ತದಲ್ಲಿ ಮಾತನಾಡಿದರು.
‘ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಕಾರ್ಡ್ಗೆ ಅನುಮಾನ ವ್ಯಕ್ತಪಡಿಸಿದ್ದ ಜನರು ಇಂದು ಸಂಭ್ರಮದಿಂದ ನಮ್ಮನ್ನು ಸ್ವಾಗತಿಸುತ್ತಿದ್ದಾರೆ. ಬಿಜೆಪಿ ಬರೀ ಭಾಷಣದ ಪಕ್ಷ, ಕಾಂಗ್ರೆಸ್ ಕೆಲಸ ಮಾಡುವ ಪಕ್ಷ ಎಂದು ಸಾಬೀತಾಗಿದೆ. ಮೈಸೂರಿನಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸವಾಗಿದ್ದರೆ ಅಭ್ಯರ್ಥಿ ಬದಲಾವಣೆ ಮಾಡುತ್ತಿರಲಿಲ್ಲ. ರಾಜಮನೆತನದವರನ್ನು ಚುನಾವಣೆಗೆ ಇಳಿಸಿ ಲಾಭ ಪಡೆಯುವ ಲೆಕ್ಕಾಚಾರ ಮಾಡುತ್ತಿರಲಿಲ್ಲ. ಇಂದು ಜನರು ಸಾಮಾನ್ಯ ಕಾರ್ಯಕರ್ತ ಲಕ್ಷ್ಮಣ್ ಅವರನ್ನು ಗೆಲ್ಲಿಸಲು ಸಜ್ಜಾಗಿದ್ದಾರೆ’ ಎಂದರು.
ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಪ್ರತೀ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಿದೆ. ದೇಶಾದ್ಯಂತ ವ್ಯಾಪಕವಾದ ಮೆಚ್ಚುಗೆ ಸಿಗುತ್ತಿದ್ದು, ರಾಜ್ಯದಲ್ಲಿ 28ಕ್ಕೆ 28 ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಶತಸಿದ್ಧ’ ಎಂದು ತಿಳಿಸಿದರು.
ಪ್ರಮುಖರಾದ ಬಿ.ಎಲ್. ಬೈರಪ್ಪ, ಶೋಭಾ ಮೋಹನ್, ಕೆ.ವಿ.ಮಲ್ಲೇಶ್, ಪಲ್ಲವಿ ಬೇಗಂ, ಆರ್.ಎಚ್ ಕುಮಾರ್, ಹರೀಶ್, ವಿಜಯ್ ಕುಮಾರ್, ಮೊಹಿಬ್, ಮೊಹಮ್ಮದ್ ಫಾರೂಕ್, ಕಲೀಮ್ ಶರೀಫ್, ಶಾದಿಖ್ ಉಲ್ಲಾ ರೆಹಮಾನ್, ಸೊಹೇಲ್, ನವೀದ್, ಶಾದಿಖ್, ನಾಸೀರ್, ಪುಟ್ಟಸ್ವಾಮಿ, ಡೈರಿ ವೆಂಕಟೇಶ್, ಮೀನಿನ ಬಸವಣ್ಣ, ಭವ್ಯ, ಚಂದ್ರಕಲಾ, ಸದಾನಂದ, ಎಸ್.ವಿ.ಮಲ್ಲೇಶ್, ಚಂದು, ವಿನಯ್, ಮಂಜು, ಮದನ್, ಮಧು, ರಜತ್, ವರುಣ್ , ಮಾದೇವ, ಮಧುರಾಜ್, ನಾಗೇಶ್ ರಘುರಾಮ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.