ಪಿರಿಯಾಪಟ್ಟಣ: ‘ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರತರಲು ಬೇಸಿಗೆ ಶಿಬಿರ ಸಹಕಾರಿಯಾಗಲಿದ್ದು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಆಯೋಜನೆಯಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಟ್ಟಣದ ನಕ್ಷತ್ರ ಡ್ಯಾನ್ಸ್ ಸ್ಟುಡಿಯೊ ಡಿ.ದೇವರಾಜು ಅರಸು ಭವನದಲ್ಲಿ ಆಯೋಜಿಸಿದ್ದ 4ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪ ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರಿಂದ ಪ್ರತಿಭೆ ಪ್ರಕಟಿಸಿ, ಸಾಧನೆಯ ಗುರಿ ತಲುಪಲು ಸಹಕಾರಿಯಾಗಲಿದೆ ಎಂದರು.
ಮುಖ್ಯ ಶಿಕ್ಷಕ ಲಕ್ಕಣ್ಣ ಮಾತನಾಡಿ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ, ಅವರ ಬೌದ್ಧಿಕ ಶಕ್ತಿ ಪ್ರಗತಿಯಾಗಲಿದೆ. ಮೊಬೈಲ್ ಮತ್ತು ಟಿವಿಗಳನ್ನು ಉತ್ತಮ ಕಲಿಕೆಗಾಗಿ ಬಳಸಿದಾಗ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು ಎಂದರು.
ಸ್ಟುಡಿಯೋ ಅಧ್ಯಕ್ಷೆ ಭವ್ಯ ಮಂಜುನಾಥ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಬೇಸಿಗೆ ಶಿಬಿರ ಆಯೋಜಿಸಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಸ್ವಾಗತ ಗೀತೆಗೆ ಚಿತ್ರಕಲಾ ಶಿಕ್ಷಕ ಪವನ್ ಲಕ್ಕಣ್ಣ ಬಿಡಿಸಿದ ಗಣೇಶನ ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಯಿತು. ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಪುರಸಭಾ ಸದಸ್ಯ ರಾಜೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಮುಖಂಡರಾದ ಸಚಿನ್, ಮುಕುಂದ, ಕೃಷ್ಣಪ್ಪ, ಮಹೇಶ್, ನೃತ್ಯ ಸಂಯೋಜಕ ಪ್ರಸನ್ನ, ಸಂಸ್ಥೆಯ ಶ್ರೇಯ, ಚಂದನ, ಕಾರುಣ್ಯ, ಚೈತ್ರ, ವಾಸವಿ, ತುಳಸಿ, ಪ್ರಾರ್ಥನಾ ಹಾಗೂ ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.