ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಗ್ರಾಮದೇವತೆ ದೊಡ್ಡಮ್ಮ, ಚಿಕ್ಕಮ್ಮ ದೇವಿ ವಾರ್ಷಿಕ ವಿಶೇಷ ಪೂಜೆ ಶುಕ್ರವಾರ ಶ್ರೀ ಗಣಪತಿ ಸೇವಾ ಸಮಿತಿಯಿಂದ ನಡೆಯಿತು.
ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಸಮಿತಿಯ ಪದಾಧಿಕಾರಿಗಳು ಬೆಳಿಗ್ಗೆ ದೇವಸ್ಥಾನ ಸ್ವಚ್ಛಗೊಳಿಸಿ, ತಳಿರು ತೋರಣ ಕಟ್ಟಿ, ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರಿಗೆ ನೈವೇದ್ಯ ಮಾಡಿ ಮಹಾಮಂಗಳಾರತಿ ನೆರವೇರಿಸಿದರು.
ಸಮಿತಿಯ ಗೌರವಾಧ್ಯಕ್ಷ ಕೆ.ವಿಜಯಕುಮಾರ್ ಮಾತನಾಡಿ, ನಮ್ಮ ಸಮಿತಿಯ ಪದಾಧಿಕಾರಿಗಳು 15 ವರ್ಷದಿಂದ ದೇವರ ವಾರ್ಷಿಕ ವಿಶೇಷ ಪೂಜೆಯನ್ನು ನಡೆಸುತ್ತಿದ್ದೇವೆ. ನಮ್ಮ ಗ್ರಾಮದಲ್ಲಿ ಗಣಪತಿ ದೇವಸ್ಥಾನ ನಿರ್ಮಿಸಲು ಹೊರಟಾಗ ಸಮಸ್ಯೆಗಳು ಉದ್ಭವವಾಗಿತ್ತು. ಗ್ರಾಮ ದೇವತೆಗಳಾದ ದೊಡ್ಡಮ್ಮ, ಮಲ್ಲಿಕಾರ್ಜುನ ಸ್ವಾಮಿ, ರಂಗನಾಥ ಸ್ವಾಮಿ ನೆನಪಿಸಿ ವಿಶೇಷ ಪೂಜೆ ನೆರವೇರಿಸಿ, ಗಣಪತಿ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಮಾತನಾಡಿ, ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ನೇತೃತ್ವದಲ್ಲಿ ಚಿಕ್ಕ ಗುಡಿಯಲ್ಲಿ ದೊಡ್ಡಮ್ಮತಾಯಿ ಮೂರ್ತಿ ಪ್ರತಿಷ್ಠಾಪಿಸಿ, ನಾಡ ದೇವತೆ ಹಬ್ಬ ಆಚರಿಸಲಾಗುತ್ತದೆ ಎಂದು ತಿಳಿಸಿ. ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿ ಆಗಲಿ, ನಮ್ಮ ಹೆಮ್ಮೆಯ ಸೈನಿಕರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತೇವೆ ಎಂದರು.
ಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಲೋಕೇಶ್, ಪದಾಧಿಕಾರಿಗಳಾದ ಜಗದೀಶ್, ಕೆ.ರಮೇಶ್, ಸುರೇಶ್, ಕಾಂತರಾಜ್, ರಾಮೇಗೌಡ, ಮರಿನಾಯ್ಕ, ಜೈರಾಮ್, ರಾಜೇಶ್, ಗ್ರಾಮಸ್ಥರಾದ ವೇಣು, ಮಧು, ಮಹಿಳೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.