
ಮೈಸೂರು: ‘ಪ್ರಜ್ವಲ್ ರೇವಣ್ಣನಂತಹ ವಿಕೃತ ಕಾಮಿ ಮತ್ತು ಮನೋವಿಕೃತಿಯ ವ್ಯಕ್ತಿಗಳಿಗೆ ಸಮಾಜ ಸ್ವಯಂ ಬಹಿಷ್ಕಾರ ಹಾಕಿ ಸಾರ್ವಜನಿಕ ಬದುಕಿನಿಂದ ನಿವೃತ್ತಿ ಕೊಡಬೇಕು’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಉಗ್ರನರಸಿಂಹೇಗೌಡ ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಹಾಸನದ ಸಂಸದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಣ್ಣನ ಮಗ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ನೂರಾರು ಮಹಿಳೆಯರ ಸಾವಿರಾರು ವಿಕೃತ ಲೈಂಗಿಕ ವಿಡಿಯೊಗಳು ರಾಜ್ಯ ಮತ್ತು ದೇಶದಾದ್ಯಂತ ಹಬ್ಬಿವೆ; ಗಡಿ ದಾಟಿಯೂ ಹೋಗಿವೆ. ಈ ಪ್ರಕರಣದ ಕೇಂದ್ರ ವ್ಯಕ್ತಿ ಪ್ರಜ್ವಲ್, ವಿಡಿಯೊಗಳು ಬಹಿರಂಗವಾದ ದಿನದಿಂದಲೂ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ತಣ್ಣಗೆ ವಿದೇಶಕ್ಕೆ ಹಾರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.
‘ಈ ಪ್ರಕರಣದಲ್ಲಿ ಕುಮಾರಸ್ವಾಮಿ, ರೇವಣ್ಣ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗಳು ಅವರ ಮನೋವಿಕೃತಿಯನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ’ ಎಂದು ದೂರಿದ್ದಾರೆ.
‘ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಳೆಯ ವಿಡಿಯೊಗಳನ್ನು ಈಗ ಬಿಟ್ಟು ರಾಜಕೀಯ ಸೇಡು ತೀರಿಸಿಕೊಂಡು ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ವಿರುದ್ಧ ಕ್ರಮ ವಹಿಸದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ ಬಿಜೆಪಿಯು ಮಾತೃಶಕ್ತಿ ಜತೆಗಿದೆ ಎಂದಿದ್ದಾರೆ. ಒಂದು ವರ್ಷದಿಂದೀಚೆಗೆ ಕುಮಾರಸ್ವಾಮಿ, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾತು, ನಡವಳಿಕೆಗಳನ್ನು (ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ಮಣಿಪುರದ ಘಟನೆ) ಪ್ರಜ್ಞಾವಂತರು ಕ್ಷಮಿಸಲಾರರು. ಹೀನ ಹಿನ್ನೆಲೆ– ನಡವಳಿಕೆಯ ಇವರು ಈಗ ನೈತಿಕತೆ ಮತ್ತು ಜವಾಬ್ದಾರಿ ಬಗ್ಗೆ ಮಾತನಾಡುವುದು ಹೇಸಿಗೆಯ ಭಾವನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.