ADVERTISEMENT

ಕನ್ನಡಾಭಿಮಾನ ಬೆಳೆಸಿಕೊಳ್ಳಿ; ಚಾರುಕೀರ್ತಿ ಭಟ್ಟಾರಕರು

ಮೈಸೂರು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 17:30 IST
Last Updated 12 ಡಿಸೆಂಬರ್ 2019, 17:30 IST
ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಸಭಾಂಗಣದಲ್ಲಿ ಗುರುವಾರ ಮುಸ್ಸಂಜೆ ಆರಂಭಗೊಂಡ ಎರಡು ದಿನದ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019ರಲ್ಲಿ ಐದು ಕೃತಿಗಳನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ್‌ ಬಿಡುಗಡೆಗೊಳಿಸಿದರು. ಡಾ.ಜಯಕುಮಾರ ಉಪಾಧ್ಯೆ, ಡಾ.ಹಂ.ಪ.ನಾಗರಾಜಯ್ಯ, ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದಾರೆ
ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಸಭಾಂಗಣದಲ್ಲಿ ಗುರುವಾರ ಮುಸ್ಸಂಜೆ ಆರಂಭಗೊಂಡ ಎರಡು ದಿನದ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019ರಲ್ಲಿ ಐದು ಕೃತಿಗಳನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ್‌ ಬಿಡುಗಡೆಗೊಳಿಸಿದರು. ಡಾ.ಜಯಕುಮಾರ ಉಪಾಧ್ಯೆ, ಡಾ.ಹಂ.ಪ.ನಾಗರಾಜಯ್ಯ, ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದಾರೆ   

ಮೈಸೂರು: ‘ಆಂಗ್ಲ ಭಾಷಾ ಸಾಮ್ರಾಜ್ಯದ ಬೆಳವಣಿಗೆಯ ಭರಾಟೆಯಲ್ಲಿ ಕನ್ನಡ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ’ ಎಂದು ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕರು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಸಭಾಂಗಣದಲ್ಲಿ ಗುರುವಾರ ಮುಸ್ಸಂಜೆ ಆರಂಭಗೊಂಡ ಎರಡು ದಿನದ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019ರಲ್ಲಿ ಮಾತನಾಡಿದ ಸ್ವಾಮೀಜಿ, ‘ಕನ್ನಡದಲ್ಲಿ ಮಾತನಾಡುವಾಗ ಆಂಗ್ಲ ಭಾಷೆ ಬಳಸುವುದನ್ನು ನಿಯಂತ್ರಿಸಬೇಕು’ ಎಂದು ಮನವಿ ಮಾಡಿದರು.

‘ಪ್ರಾಕೃತ 2300 ವರ್ಷಗಳ ಹಿಂದೆಯೇ ಶ್ರವಣಬೆಳಗೊಳಕ್ಕೆ ಬಂದಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ಈ ಎರಡೂ ಭಾಷೆಗಳ ಜತೆ, ನೆಲದ ಭಾಷೆಯಾದ ಕನ್ನಡವನ್ನು ಕಾಪಾಡಬೇಕಿದೆ. ಇದಕ್ಕಾಗಿ ಫ್ರೆಂಚರು, ಜರ್ಮನ್ನರಂತೆ ತಾಯ್ನುಡಿಯ ಅಭಿಮಾನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಭಟ್ಟಾರಕರು ತಿಳಿಸಿದರು.

ADVERTISEMENT

‘ಜ್ಞಾನದ ಬೆಳಕು ನಿರಂತರವಾದುದು. ಜ್ಞಾನ ಪ್ರಸಾರಕ್ಕೆ ಯಾವುದೇ ಅಡೆತಡೆಯಿಲ್ಲ. ಸೂರ್ಯ ಜಗತ್ತಿನಲ್ಲಿ ಹೇಗೆ ಅಸ್ತಂಗತನಾಗದೆ ಬೆಳಗುತ್ತಾನೆ, ಅದೇ ರೀತಿ ಜ್ಞಾನಕ್ಕೂ ಅಸ್ತಂಗತ ಎಂಬುದಿಲ್ಲ. ಜ್ಞಾನೋಪಾಸನೆಗೆ ಭೇದ–ಭಾವವಿಲ್ಲ. ಪ್ರತಿಯೊಬ್ಬರೂ ಜ್ಞಾನೋಪಾಸಕರಾಗುವ ಜತೆಯಲ್ಲೇ ಸತ್ಯದ ಸಂಶೋಧನೆ ಅರಿಯಲು ಮುಂದಾಗಬೇಕು’ ಎಂಬ ಕಿವಿಮಾತುಗಳನ್ನು ಹೇಳಿದರು.

‘ಸರ್ವ ಜನಾಂಗದ ಜತೆ ಆತ್ಮೀಯ ಒಡನಾಟ, ಸಂಬಂಧ ಹೊಂದಿರುವವರು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು. ಶ್ರೀಗಳ ಪೀಠಾರೋಹಣದ ಸುವರ್ಣ ಸಮಾರಂಭದಲ್ಲಿ ಭಾಗಿಯಾಗಿರುವುದು ಸಂತಸ ಕೊಟ್ಟಿದೆ’ ಎಂದು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ಸಹಿಷ್ಣುತೆ, ಅಹಿಂಸೆಯನ್ನು ಜಗತ್ತಿಗೆ ಬೋಧಿಸಿದ್ದು ಜೈನ ಧರ್ಮ. ಈ ಧರ್ಮದ ಸಾಹಿತ್ಯ ಪ್ರಾಕೃತ ಭಾಷೆಯಲ್ಲಿದೆ. ದವಳ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ತಪಸ್ವಿ ಭಟ್ಟಾರಕರು. ಇದನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕು’ ಎಂದು ಹೇಳಿದರು.

‘ಕನ್ನಡ ಸಾಹಿತ್ಯದ ಮೇಲೆ ಪ್ರಾಕೃತ ವಿಶೇಷ ಪ್ರಭಾವ ಬೀರಿದೆ. ಇದನ್ನು ಜನ ಭಾಷೆಯನ್ನಾಗಿಸುವ ದೊಡ್ಡ ಸೇವಾ ಕಾರ್ಯವನ್ನು ಚಾರುಕೀರ್ತಿ ಭಟ್ಟಾರಕರು ಕೈಗೊಂಡಿದ್ದಾರೆ. ಹಿಡಿದ ಕೆಲಸ ಪೂರೈಸುವ ತಪಸ್ವಿ ಅವರು’ ಎಂದು ಸುತ್ತೂರು ಸ್ವಾಮೀಜಿ ಪ್ರಶಂಸಿಸಿದರು.

ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಕುಲಸಚಿವ ಪ್ರೊ.ಆರ್.ಶಿವಪ್ಪ, ಡಾ.ಜಯಕುಮಾರ ಉಪಾಧ್ಯೆ ಉಪಸ್ಥಿತರಿದ್ದರು.

ಪದ್ಮಶ್ರೀ ಪುರಸ್ಕೃತ ರಮಾಕಾಂತ್ ಶುಕ್ಲಾ ಚಾರುಕೀರ್ತಿ ಭಟ್ಟಾರಕರಿಗೆ ಪದ್ಯಾಂಜಲಿ ಅರ್ಪಿಸಿದರು. ಡಾ.ಹಂ.ಪ.ನಾಗರಾಜಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ನೀಲಗಿರಿ ಎಂ.ತಳವಾರ ಸ್ವಾಗತಿಸಿದರು. ಪ್ರೊ.ಸಿ.ನಾಗಣ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.