ADVERTISEMENT

ಮುಖ್ಯಮಂತ್ರಿ ‘ಬುರುಡೆ’ ಹೇಳಿಕೆಗೆ ಪ್ರತಾಪ ಸಿಂಹ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 5:58 IST
Last Updated 24 ಡಿಸೆಂಬರ್ 2023, 5:58 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   ಪ್ರಜಾವಾಣಿ ಚಿತ್ರ

ಮೈಸೂರು: ‘ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಸಂಸದ ಬುರುಡೆ ಬಿಡುತ್ತಾನೆ’ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಾಪ ಸಿಂಹ ತಿರುಗೇಟು ನೀಡಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರು ಬುರುಡೆ ಬಿಡುತ್ತಿದ್ದಾರೆ, ಯಾರು ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತಿದೆ’ ಎಂದು ಟೀಕಿಸಿದರು.

‘ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದಾಗ ಜನರು ಬೈದಿದ್ದು ಯಾರನ್ನು? ಆ ಸಮಸ್ಯೆ ಪರಿಹರಿಸಿದ್ದು ಯಾರು? ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈದಿದ್ದು ಯಾರನ್ನು, ಆ ಸಮಸ್ಯೆ ಬಗೆಹರಿಸಿದವರಾರು? ಬೈದಿದ್ದು ನನ್ನನ್ನೇ; ಸಮಸ್ಯೆ ಪರಿಹರಿಸಿದ್ದೂ ಈ ಪ್ರತಾಪ ಸಿಂಹನೇ. ಸಮಸ್ಯೆ ಆದಾಗ ಸಿದ್ದರಾಮಯ್ಯ ಅಥವಾ ಡಾ.ಎಚ್‌.ಸಿ. ಮಹಾದೇವಪ್ಪ ಎಲ್ಲಿಗೆ ಹೋಗಿದ್ದರು’ ಎಂದು ಕೇಳಿದರು.

ADVERTISEMENT

‘₹ 8,500 ಕೋಟಿ ಯೋಜನೆ ಇದು. ಇದಕ್ಕೆ ಸಿದ್ದರಾಮಯ್ಯ ಅವರ ಸರ್ಕಾರದಿಂದ ₹ 8 ಕೊಟ್ಟಿದ್ದರೆ ಸಿದ್ದರಾಮಯ್ಯ– ಮಹದೇವಪ್ಪ ಜೋಡಿ ರಸ್ತೆ ಎಂದೇ ಹೆಸರಿಟ್ಟು ಬಿಡೋಣ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಇದು ನನ್ನ ರಸ್ತೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿಯಷ್ಟೆ. ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ. ಮುಖ್ಯಮಂತ್ರಿಯಾದವರು ಪದ ಪ್ರಯೋಗದಲ್ಲಿ ಎಚ್ಚರ ವಹಿಸಬೇಕು. ಎಲ್ಲರನ್ನೂ ತಾತ್ಸರದಿಂದ ಮಾತಾಡುವುದನ್ನು ನಿಲ್ಲಿಸಿ. ಸಾಯುವವರೆಗೂ ರಾಜಕೀಯ ಮಾಡಲು ನಾನು ಬಂದಿಲ್ಲ. ಸಾಯುವವರೆಗೂ ರಾಜಕೀಯ ಮಾಡಬೇಕು ಎಂದುಕೊಂಡವರು ಹೇಳಿಕೊಳ್ಳಲು ಏನೂ ಇಲ್ಲದಿದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರು ಮಾಡುತ್ತಾರೆ’ ಎಂದು ತಿರುಗೇಟು ನೀಡಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಹಾರಾಜರು ತಮ್ಮ ಮನೆಯ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲವೆಂದು ಸಿದ್ದರಾಮಯ್ಯ ಹಿಂದೆ ಹೇಳಿದ್ದರು. ಆಗ ನಮಗೆ ಗೊತ್ತಾಗಿದ್ದೇನೆಂದರೆ, ಸಿದ್ದರಾಮಯ್ಯ ಪ್ರೀತಿ–ಅಭಿಮಾನ–ಗೌರವ ಟಿಪ್ಪುಗೇ ಹೊರತು ಮೈಸೂರು ಮಹಾರಾಜರಿಗೆ ಅಲ್ಲ ಎನ್ನುವುದು. ಅವರ ನಿಷ್ಠೆ ಮಹಾರಾಜರಿಗೆ ಅಲ್ಲ. ಸಿದ್ದರಾಮಯ್ಯ ಅವರು ಬಂದಾಗ ಈ ರೀತಿ ಆಗುತ್ತದೆ ಎಂದೇ ಮೈಸೂರು ಮಹಾರಾಜರ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡಲು ನಮ್ಮ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿತ್ತುದ’ ಎಂದರು.

ಐಷಾರಾಮಿ ಜೆಟ್‌ನಲ್ಲಿ ಸಿದ್ದರಾಮಯ್ಯ ಪ್ರಯಾಣಿದ ಬಗ್ಗೆ ಪ್ರತಿಕ್ರಿಯಿಸಿ, ‘ತಮ್ಮ ನಡೆ ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಅವರು ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯು ಸರ್ಕಾರಿ ವಿಮಾನಗಳಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್‌ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ. ದೇಶಕ್ಕೆ ಇರುವುದು ಒಬ್ಬರೇ ಪ್ರಧಾನಿ. ದೇಶದಲ್ಲಿ 29 ಜನ ಮುಖ್ಯಮಂತ್ರಗಳಿದ್ದಾರೆ. ನೀವು ಸುಮ್ಮನೆ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ’ ಎಂದು ಹೇಳಿದರು.

‘ಮಹಾರಾಜರು ಮನೆ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಆ ಆಸ್ಪತ್ರೆ ನಾನು ಮಾಡಿದೆ, ಮನೆ ಯಜಮಾನಿಗೆ ₹ 2ಸಾವಿರ ಕೊಟ್ಟೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದಾರೆ. ಇವರ ಮನೆಯಿಂದ ದುಡ್ಡು ತಂದು ಕೊಡುತ್ತಿದ್ದಾರಾ ಎಂದು ನಾವು ಕೇಳಿದರೆ ಹೇಗಿರುತ್ತದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.