ಮೈಸೂರು: ‘ನಗರದ ಅಖಿಲ ಭಾರತ ವಾಕ್–ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ನಿರ್ಮಿಸಿರುವ ಶ್ರೇಷ್ಠತೆಯ ಕೇಂದ್ರವನ್ನು ಖುದ್ದಾಗಿ ಉದ್ಘಾಟಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಕೇಂದ್ರವನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಸದ್ಯದ ಕಾರ್ಯಕ್ರಮದ ಪ್ರಕಾರ, ಪ್ರಧಾನಿಯು ಕೇಂದ್ರವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಇದು ವಿಶೇಷ ಸಂಸ್ಥೆಯಾಗಿದ್ದು, ಖುದ್ದಾಗಿ ಭೇಟಿ ಕೊಟ್ಟು ಉದ್ಘಾಟಿಸುವಂತೆ ಮನವಿ ಮಾಡಿದ್ದೇನೆ. ಪೂರಕವಾಗಿ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ಶ್ರೇಷ್ಠತೆಯ ಕೇಂದ್ರದಿಂದ ವಾಕ್–ಶ್ರವಣ ದೋಷವುಳ್ಳವರಿಗೆ ಮತ್ತಷ್ಟು ಸೇವೆಗಳು ಲಭ್ಯವಾಗಲಿವೆ’ ಎಂದರು.
ಸಂಸ್ಥೆಯ ನಿರ್ದೇಶಕಿ ಡಾ.ಎಂ. ಪುಷ್ಪಾವತಿ, ‘57 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಭೇಟಿ ನೀಡಬೇಕು ಎನ್ನುವುದು ನಮ್ಮ ಅಭಿಲಾಷೆ. ಅವರು ಇಲ್ಲಿಗೆ ಬಂದರೆ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.
‘ದೇಶದಲ್ಲಿ ಶೇ 17ರಷ್ಟು ಮಂದಿ ಶ್ರವಣ ದೋಷ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ನ್ಯೂನತೆ ಉಳ್ಳವರಿಗೆ ಚಿಕಿತ್ಸೆ, ಮಾರ್ಗದರ್ಶನವನ್ನು ಸಂಸ್ಥೆ ನೀಡುತ್ತಿದೆ. ಶೀಘ್ರದಲ್ಲೇ ಆರಂಭಗೊಳ್ಳಲಿರುವ ಶಸ್ತ್ರಚಿಕಿತ್ಸೆ ಸೇವೆಗೆ ಸರ್ಕಾರದ ನಿರ್ದೇಶನದಂತೆ ಶುಲ್ಕ ನಿಗದಿಪಡಿಸಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.