ಮೈಸೂರು: ‘ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ನವರು ತರಾವರಿ ಆರೋಪ ಮಾಡುತ್ತಿದ್ದಾರೆ. ಇವಿಎಂ ಹಟಾವೊ ಚಳವಳಿ ಆರಂಭಿಸಿದ್ದಾರೆ. ಮತ ಕಳ್ಳತನದ ಬಗ್ಗೆ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳಿಗೆ ಸಾಕ್ಷಿ ಏನಿದೆ?’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕೇಳಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಗೆದ್ದ ಕಡೆಯಲ್ಲೆಲ್ಲಾ ಮತಗಳ್ಳತನ ಆಗಿದೆಯೇ? ಜನಕ್ಕಿಂತಲೂ ಜಾಸ್ತಿ ಮತದಾರರಿದ್ದಾರೆ ಎಂಬ ಆರೋಪಕ್ಕೆ ಸಾಕ್ಷಿಯೇ ಇಲ್ಲ’ ಎಂದರು.
‘ಸಿದ್ದರಾಮಯ್ಯ ಅವರೂ ರಾಹುಲ್ ಗಾಂಧಿ ರೀತಿ ಮಾತನಾಡಿದರೆ ನಾವೇನು ಹೇಳಬೇಕು’ ಎಂದರು.
ಸೌಜನ್ಯ ಪರ:
‘ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲಾ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆಯಿಂದ ತನಿಖೆ ಆಗಿದೆ. ಬೇರೆ ಇನ್ನೂ ಯಾವುದಾದರೂ ತನಿಖೆ ಆಗಬೇಕಾದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
‘ಧರ್ಮಸ್ಥಳದಲ್ಲಿ ಸಾವಿರಾರು ಕೊಲೆ ಆಗಿದೆ ಎನ್ನುತ್ತಾರೆ. ಇದು ವಾಸ್ತವದಲ್ಲಿ ಸಾಧ್ಯವೇ? ಕೊಲೆ ಮಾಡಿಸಲು ಧರ್ಮಾಧಿಕಾರಿಯು ದಾವುದ್ ಇಬ್ರಾಹಿಂ ರೀತಿ ಡಾನಾ? ಧರ್ಮಸ್ಥಳವನ್ನು ಗುರಿ ಮಾಡಿದ್ದು, ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ’ ಎಂದು ದೂರಿದರು.
‘ದೂರು ನೀಡಿರುವ ಅನಾಮಿಕನ ಪೂರ್ವಾಪರವನ್ನು ಬಹಿರಂಗಪಡಿಸಿ’ ಎಂದು ಒತ್ತಾಯಿಸಿದರು.
ಪ್ರತಾಪ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ ಏನಾದರೂ ಸಾಕ್ಷಿ, ವಿಷಯ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ ಅಥವಾ ಮಾಧ್ಯಮಕ್ಕೆ ತಿಳಿಸಲಿ. ಸಾಕ್ಷಿಯನ್ನೇಕೆ ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತೀರಾ, ಅದರಲ್ಲಿ ನಿಮ್ಮ ಮನೆಯವರದು ಏನಾದರೂ ಇದೆಯೇ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.