ADVERTISEMENT

ಕುರಿ ಚರ್ಬಿ ತಿಂದು ಕೊಬ್ಬಿನ ಮಾತು ಆಡುತ್ತಿದ್ದಾರೆ ಎಂದ ಪ್ರತಾಪ ಸಿಂಹ: ಟೀಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 16:13 IST
Last Updated 10 ಏಪ್ರಿಲ್ 2023, 16:13 IST
   

ಮೈಸೂರು: ‘ಕುರಿ ಚರ್ಬಿ ತಿಂದು ಕೊಬ್ಬಿನ ಮಾತು ಆಡುತ್ತಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಜಾತಿ ಸೂಚಕವಾಗಿಯೇ ಹೀಯಾಳಿಸಿರುವುದು ಖಂಡನೀಯ. ಇದರ ಪರಿಣಾಮವನ್ನು ಎದುರಿಸಲಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗುಜರಾತಿನ ನರೇಂದ್ರ ಮೋದಿಯನ್ನು ಮೆಚ್ಚಿಸಲು ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿಯನ್ನು ಪ್ರತಾಪ ಸಿಂಹ ಸೇರಿದಂತೆ ಇತರೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅಮುಲ್ ಉತ್ಪನ್ನಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಸಲು ಪ್ರತಾಪ ಸಿಂಹ ಮತ್ತು ಬಿಜೆಪಿ ಸರ್ಕಾರ ಮುಂದಾಗಿದ್ದು, ಇದು ನಾಡದ್ರೋಹದ ಕೆಲಸ’ ಎಂದು ಟೀಕಿಸಿದ್ದಾರೆ.

‘ಚಾಮರಾಜನಗರದಲ್ಲಿ 34 ಮಂದಿ ಆಮ್ಲಜನಕವಿಲ್ಲದೆ ಸತ್ತರೂ ಬಾರದ ಪ್ರಧಾನಿ, ಹುಲಿ ನೋಡಲು ಬಂದಿರುವುದು ಅವರ ಅಧಿಕಾರ ದುರುಪಯೋಗಕ್ಕೆ ಹಿಡಿದ ಕೈಗನ್ನಡಿ. ಬಂಡೀಪುರ ಅರಣ್ಯದಲ್ಲಿ ಅನೇಕ ಕಾನೂನು ಕ್ರಮಗಳಿವೆ. ಪ್ರಾಣಿಗಳ ಹಿತಕ್ಕಾಗಿ ಅರಣ್ಯ ವಾಸಿಗಳನ್ನೇ ಒಕ್ಕಲೆಬ್ಬಿಸುವ ಕಾನೂನುಳಿರುವಾಗ ಮೋದಿ ಭೇಟಿಗಾಗಿ 3 ಹೆಲಿಪ್ಯಾಡ್ ನಿರ್ಮಾಣ, ಕ್ಯಾಮೆರಾಮ್ಯಾನ್, ಎಸ್.ಪಿ.ಜಿ. ಸಿಬ್ಬಂದಿಯ 9 ಜೀಪುಗಳು, 1 ಆಂಬುಲೆನ್ಸ್ ನಿಲ್ಲಿಸಿ ಏಕವ್ಯಕ್ತಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟದ್ದು ಹೇಗೆ ಎಂಬುದಕ್ಕೆ ಪ್ರತಾಪ ಸಿಂಹ ಉತ್ತರಿಸಲಿ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.