ADVERTISEMENT

‘ಮುಸ್ಲಿ ಮೂಲಭೂತವಾದಿಗಳಿಂದ ಶಾಂತಿ ಕದಡುವ ಯತ್ನ’

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 3:08 IST
Last Updated 30 ಜೂನ್ 2022, 3:08 IST

ಮೈಸೂರು: ‘ರಾಜಸ್ಥಾನದ ಉದಯಪುರದಲ್ಲಿಬಿಜೆಪಿಯ ಹಿಂದಿನ ವಕ್ತಾರೆ ನೂಪುರ್‌ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ ಮಾಡಿರುವುದು ಪೈಶಾಚಿಕವಾದುದು. ಮುಸ್ಲಿಂ ಮೂಲಭೂತ ವಾದಿಗಳಿಂದ ದೇಶದ ಶಾಂತಿ ಕೆಡಿಸುವ ಯತ್ನವಿದು’ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿ, ‘ಗೋವು ಕಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಬ್ರದರ್, ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಟ್ವೀಟ್ ಮಾಡಿ ಕುಳಿತರೆ ಕೆಲಸ ಮುಗಿಯಿತೇ?’ ಎಂದು ‍ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಇಲ್ಲೂ ನಡೆಯುತ್ತದೆ. ಇದು ರಾಜ್ಯದ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ಟಿಪ್ಪು ಸಂತತಿಗಳ ಬಗ್ಗೆ ಜಾಗೃತರಾಗಿರಬೇಕು’ ಎಂದರು.

ADVERTISEMENT

‘ಹಿಂದೂಗಳ ಧ್ವನಿ ಅಡಗಿಸಲು ರಾಜಸ್ಥಾನದಲ್ಲಿ ಕುಕೃತ್ಯ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್‌ನವರು ಮುಸ್ಲಿಂ ಓಲೈಕೆ ಮಾಡುತ್ತಿರುವುದರಿಂದ ಈ ರೀತಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರೇ ರಾಜಸ್ಥಾನ ಸರ್ಕಾರಕ್ಕೆ ಬುದ್ಧಿ ಹೇಳುತ್ತೀರಾ’ ಎಂದು ಪ್ರಶ್ನಿಸಿದರು.

‘ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ, ಭಯೋತ್ಪಾದಕರೆಲ್ಲಾ ಮುಸ್ಲಿಮರು. ಒಳ್ಳೆಯ ಮುಸ್ಲಿಮರು ಈಗೇಕೆ ಮಾತಾಡುತ್ತಿಲ್ಲ. ಮೌನವಾಗಿದ್ದುಕೊಂಡು ಕುಮ್ಮುಕು ಕೊಡುತ್ತಿದ್ದಾರಾ? ಧ್ವನಿ ಎತ್ತದಿದ್ದರೆ ಅನುಮಾನ ಮೂಡುತ್ತದೆ. ಮೌಲ್ವಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ. ಆ ಕೊಲೆ ತಪ್ಪೆಂದು ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ?’ ಎಂದು ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.