ADVERTISEMENT

ಮೈಸೂರು | ‘ಜಯದೇವ ಆಸ್ಪತ್ರೆ ಮೇಲೆ ಒತ್ತಡ’

ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 10:39 IST
Last Updated 9 ಸೆಪ್ಟೆಂಬರ್ 2022, 10:39 IST
ಡಾ.ಸಿ.ಎನ್‌. ಮಂಜುನಾಥ್ 
ಡಾ.ಸಿ.ಎನ್‌. ಮಂಜುನಾಥ್    

ಮೈಸೂರು:‘ಸ್ಥಳೀಯ ಆಸ್ಪತ್ರೆಗಳಲ್ಲಿಯೇ ಶಮನಗೊಳ್ಳುವ ಕಾಯಿಲೆಗಳ ಚಿಕಿತ್ಸೆಗೂ ಜಯದೇವ ಆಸ್ಪತ್ರೆಯನ್ನುರೋಗಿಗಳು ಅವಲಂಬಿಸುತ್ತಿದ್ದು, ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಹೇಳಿದರು.

‘ಕಟ್ಟಡಗಳನ್ನು ಕಟ್ಟುವುದರಿಂದ ವೈದ್ಯಕೀಯ ವ್ಯವಸ್ಥೆ ಸುಧಾರಣೆಯಾಗದು. ವೈದ್ಯಕೀಯ ಕಾಲೇಜು, ಆಸ್ಪತ್ರೆ ಸ್ಥಾಪನೆಯ ಜೊತೆಯಲ್ಲಿಯೇ ಮಾನವ ಸಂಪನ್ಮೂಲಕ್ಕೂ ಸಚಿವ ಸಂಪುಟದಿಂದ ಅನುಮೋದನೆ ಪಡೆಯಬೇಕು. ಅದರಿಂದ ಉತ್ತಮ ಸೇವೆ ನೀಡಲು ಸಾಧ್ಯ’ ಎಂದುಶುಕ್ರವಾರ ಇಲ್ಲಿನ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ಇಲ್ಲ. ಜಿಲ್ಲಾಸ್ಪತ್ರೆ– ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಮಾನವ ಸಂಪನ್ಮೂಲ ಭರ್ತಿಯಾದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ.‌ಹಳ್ಳಿಗಳಲ್ಲಿ ವೈದ್ಯರಿಗೆ‍ಪೂರಕ ವಾತಾವರಣವಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಒತ್ತಡವೂ ಹೆಚ್ಚಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಇನ್ಪೊಸಿಸ್‌ ಫೌಂಡೇಶನ್‌ಜಯದೇವ ಸಂಸ್ಥೆಗೆ 350 ಹಾಸಿಗೆ ಸಾಮರ್ಥ್ಯದ ವಿಶ್ವದರ್ಜೆಯ ಕಟ್ಟಡಕಟ್ಟಿಸಿಕೊಟ್ಟಿದೆ. ಅದರಿಂದ ಆಸ್ಪತ್ರೆ ಸಾಮರ್ಥ್ಯ 1,000 ಹಾಸಿಗೆಗಳಿಗೆ ಹೆಚ್ಚಾಗಿದೆ. ಇಷ್ಟು ಸಾಮರ್ಥ್ಯದ ದೇಶದ ಮೊದಲ ಹೃದ್ರೋಗ ಸಂಸ್ಥೆ ಎಂಬ ಶ್ರೇಯ ರಾಜ್ಯ ಪಾತ್ರವಾಗಿದ್ದು, ಏಮ್ಸ್‌ಗಿಂತಲೂ ತಿಂಗಳಿಗೆ 3 ಸಾವಿರ ಮಂದಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

‘ಜಿಮ್‌,ವ್ಯಾಯಾಮವನ್ನು ದೇಹ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಬೇಕು. ಒತ್ತಡ, ಭಾರದ ವ್ಯಾಯಾಮಗಳನ್ನು ಮಾಡುವ ಮುಂಚೆ ಮೊದಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಪ್ರತಿ 500 ಮಂದಿರ ಒಬ್ಬರಲ್ಲಿಹೈಪೋಥೆಟಿಕಲ್‌ ಕಾರ್ಡಿಯೊಮ್ಯೊಪತಿ ಕಾಯಿಲೆಯಿದ್ದು, ಹೃದಯ ಸ್ನಾಯುಗಳು ಬಲವಾಗಿರುತ್ತವೆ. ಅಂಥಹವರು ಇದ್ದಕ್ಕಿಂದ್ದಂತೆ ಸಾವನ್ನುಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ತಪಾಸಣೆ ಅನಿವಾರ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹುಬ್ಬಳ್ಳಿಯಲ್ಲಿ 400 ಹಾಸಿಗೆಗಳ ಆಸ್ಪತ್ರೆ:‘ಜಯದೇವ ಹೃದ್ರೋಗ ಸಂಸ್ಥೆಯು ರಾಜ್ಯದ ಎಲ್ಲ ಕಂದಾಯ ವಲಯ ಕೇಂದ್ರದಲ್ಲಿ ಇರಬೇಕು. ಮೈಸೂರು, ಬೆಂಗಳೂರು, ಗುಲ್ಬರ್ಗದಲ್ಲಿ ಸ್ಥಾಪಿಸಲಾಗಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸ್ಥಾಪಿಸುವ ಪ್ರಸ್ತಾವವಿತ್ತು. ಶೀಘ್ರ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಶಂಕುಸ್ಥಾಪನೆ ಹುಬ್ಬಳ್ಳಿಯಲ್ಲಿ ನಡೆಯಲಿದೆ’ ಎಂದು ಮಂಜುನಾಥ್‌ ಹೇಳಿದರು.

‘ಎಲ್ಲ ಜಿಲ್ಲೆಯಲ್ಲೂ ಜಯದೇವ ಆಸ್ಪತ್ರೆ ಸ್ಥಾಪನೆ ಮಾಡಿದರೆ ಎಚ್‌ಎಂಟಿ ಕಂಪನಿಗಾದ ನಷ್ಟ ನಮಗೂ ಆಗಬಹುದು. ಆರ್ಥಿಕ ನಿರ್ವಹಣೆ ದೃಷ್ಟಿಯಿಂದ ಎಲ್ಲರೂ ಯೋಚಿಸಬೇಕು. ಸ್ಥಾಪನೆಗೆ ಒತ್ತಡ ಹಾಕಬಾರದು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.