ಮೈಸೂರು: ದೇವರಾಜ ಅರಸು ರಸ್ತೆ ಹಾಗೂ ಅಶೋಕ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವಂತೆ ನಗರಪಾಲಿಕೆಯು ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರಪಾಲಿಕೆಯು ಜನರ ತೆರಿಗೆ ಹಣ ಸ್ವೀಕರಿಸಿ ಜನರಿಗೆ ಪ್ರಯೋಜನವಾಗದ ಕಾಮಗಾರಿಗಳನ್ನು ನಡೆಸುತ್ತಿದೆ. ಆದರೆ, ವಾಹನ ನಿಲುಗಡೆಗೆ ಯಾವ ಅನುಕೂಲವನ್ನೂ ಕಲ್ಪಿಸಿಲ್ಲ. ಇದೀಗ ಈ ರಸ್ತೆಗಳಲ್ಲಿ ಬಿಸಿಲು, ಮಳೆಯಲ್ಲಿ ವಾಹನ ನಿಲ್ಲಿಸಲು ಶುಲ್ಕ ವಸೂಲಿಗೆ ಮುಂದಾಗಿರುವುದು ಖಂಡನೀಯ ವಿಚಾರ ಎಂದು ಸದಸ್ಯರು ಪಾಲಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ವೇದಿಕೆಯ ಅಧ್ಯಕ್ಷರಾದ ಪ್ರೇಮಕುಮಾರ್ ಮಾತನಾಡಿ, ರಸ್ತೆ ಮೇಲೆ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವುದು ಕಾನೂನುಬಾಹಿರ. ಒಂದು ವೇಳೆ ಪಾಲಿಕೆ ಈ ಹಾದಿಯಲ್ಲಿಯೇ ಮುಂದುವರೆಯುವುದಾದರೆ ಕಾನೂನು ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು.
ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ, ಸದಸ್ಯರಾದ ಎಂ.ಎ.ಮೋಹನ್, ಕುಮಾರ್ ಗೌಡ, ಪ್ರಮೋದ್ ಗೌಡ, ವಿಕ್ರಂ ಅಯ್ಯಂಗಾರ್, ಎಂ.ಜಿ.ಮಹೇಶ್, ಎಸ್.ಎನ್.ರಾಜೇಶ್, ಸಂದೇಶ್ ಪವಾರ್, ನಿತಿನ್, ಹರೀಶ್ ಅಂಕಿತ್, ದೀಪಕ್, ಪ್ರಶಾಂತ್, ಶ್ರೀನಿವಾಸ್, ಶರ್ಮನ್, ರಾಜು, ಕುಮಾರ್, ಉಮಾಕಾಂತ್, ಉಮೇಶ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.